ಮಂಗಳೂರು: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆ ದ್ವೇಷಪೂರಿತ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಅವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ದೇಶದ ಅಭಿವೃದ್ಧಿಗೆ ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಕುಟುಂಬವು ಮಹತ್ತರ ಕೊಡುಗೆ ನೀಡಿದೆ. ಅಂತಹ ಕುಟುಂಬದ ಹಿನ್ನೆಲೆ ಹೊಂದಿರುವ ರಾಹುಲ್ ಗಾಂಧಿ ಅವರ ಕುಟುಂಬವನ್ನು ಧ್ವಂಸ ಮಾಡುತ್ತೇವೆ ಎಂಬ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ನೀಟ್ ಪರೀಕ್ಷೆ ಹಗರಣದಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸಂಸತ್ತಿನ ಒಳಗೂ ಹೊರಗೂ ಹೋರಾಟ ನಡೆಸಿದ್ದು, ವಿರೋಧ ಪಕ್ಷದ ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ-ಮೊನ್ನೆ ಪಕ್ಷಕ್ಕೆ ಬಂದವರು ಅಧ್ಯಕ್ಷರಾಗುವುದು ಸೂಕ್ತವಲ್ಲ. ಪಕ್ಷಕ್ಕಾಗಿ ದೀರ್ಘಕಾಲ ದುಡಿದ ಹಿರಿಯ, ನಿಷ್ಠಾವಂತ ಹಾಗೂ ನೈಜ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಕ್ಷದ ಪ್ರಮುಖರಾದ ಪಿಯೂಸ್ ರೊಡ್ರಿಗಸ್, ಶಾಹುಲ್ ಹಮೀದ್, ಬೇಬಿ ಕುಂದರ್ , ಅಬ್ಬಾಸ್ ಅಲಿ, ಸುಭೋದಯ ಆಳ್ವ, ಅಪ್ಪಿ ಎಸ್, ವಿಕಾಸ್ ಶೆಟ್ಟಿ, ಟಿ.ಕೆ.ಸುಧೀರ್ , ನಿತ್ಯಾನಂದ ಶೆಟ್ಟಿ ಇದ್ದರು.
What do you feel about this post?
Like
Love
Happy
Haha
Sad





