ಕೊಪ್ಪಳ: ಮಸೀದಿಯಲ್ಲಿ ಹೇಳಿದರೆ ಯಾರನ್ನಾದರೂ ಸೋಲಿಸಬಹುದಿತ್ತು ಎನ್ನುವ ಅನ್ಸಾರಿ ಅವರು, ಅದೇ ರೀತಿ ಹೇಳಿ ತಾವೇ ಗೆಲ್ಲಬಹುದಿತ್ತಲ್ಲ ಹಾಗಿದ್ದರೆ ಯಾಕೆ ಸೋತರು? ಎಂದು ಸಚಿವ ಶಿವರಾಜ ತಂಗಡಗಿ ಅವರು ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆಯ ಬಳಿಕ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಸೋಲು-ಗೆಲುವು ಒಬ್ಬಿಬ್ಬರು ವ್ಯಕ್ತಿಗಳಿಂದ ನಿರ್ಧಾರವಾಗುವುದಿಲ್ಲ. ಕ್ಷೇತ್ರದ ಮತದಾರರ ತೀರ್ಮಾನವೇ ಅಂತಿಮವಾಗಿದ್ದು, ಅನ್ಸಾರಿ ಅವರು ತಮ್ಮ ಸೋಲಿಗೆ ಇತರರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
“ಅನ್ಸಾರಿ ಅವರು ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆದರೆ ತಮ್ಮ ಸೋಲಿಗೆ ರಾಯರಡ್ಡಿ ಹಾಗೂ ಹಿಟ್ನಾಳ ಅವರು ಕಾರಣ ಎಂದು ಹೇಳುವುದು ಚಿಕ್ಕ ಮಕ್ಕಳ ವರ್ತನೆಯಂತಿದೆ ಎಂದು ತಂಗಡಗಿ ಕಿಡಿಕಾರಿದರು.
ಚುನಾವಣೆ ವೇಳೆ ಅಮರೇಗೌಡ ಬಯ್ಯಾಪುರ ಹಾಗೂ ತಾವು ಅನ್ಸಾರಿ ಅವರನ್ನು ಭೇಟಿ ಮಾಡಲು ಮನೆಗೆ ತೆರಳಿದ್ದರೂ, ಅವರು ಮಹಡಿಯಲ್ಲೇ ಉಳಿದು ಬಹಳ ಹೊತ್ತಾದರೂ ಕೆಳಗೆ ಬರಲಿಲ್ಲ. ಪಕ್ಷದ ನಾಯಕರೊಂದಿಗೇ ಹೀಗೆ ನಡೆದುಕೊಳ್ಳುವವರು ಮತದಾರರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಊಹಿಸಬಹುದು ಎಂದು ವಾಗ್ದಾಳಿ ನಡೆಸಿದರು.
ಜಿಲ್ಲೆಯ ಮೂವರು ಶಾಸಕರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ದೊರೆತಿದ್ದು, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರೂ ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ತಂಗಡಗಿ ಹೇಳಿದರು. ಸಾಮಾಜಿಕ ನ್ಯಾಯ ಹಾಗೂ ವಿವಿಧ ಮಾನದಂಡಗಳ ಆಧಾರದಲ್ಲಿ ಸಚಿವ ಸಂಪುಟ ರಚನೆಯಾಗಿದ್ದು, ಹಿಟ್ನಾಳ ಅವರಿಗೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಮಾನ ದೊರೆಯುವ ವಿಶ್ವಾಸವಿದೆ ಎಂದರು.
ಹಿಟ್ನಾಳ ಬೆಂಬಲಿಗರ ಸಾಮೂಹಿಕ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
What do you feel about this post?
Like
Love
Happy
Haha
Sad





