ಮಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ 3 ನೇ ಸಭೆ ರಾಜ್ಯದಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ನಡೆಯಲಿದ್ದು, ಬಳಿಕ ಸಮಿತಿ ತನ್ನ ವರದಿ ಲೋಕಸಭೆಗೆ ಮಂಡಿಸಲಿದೆ ಎಂದು ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾಯಿತ ಪ್ರತಿನಿಧಿಗಳು ಮತ್ತೇ ಮತ್ತೇ ಪಕ್ಷಾಂತರ ಮಾಡುವುದ್ನು ತಡೆಯುವ ಉದ್ದೇಶದಿಂದ ಸಂವಿಧಾನದ 10 ನೇ ವಿಧಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸ್ಪೀಕರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಈ ಸಮತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೇನೆ. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ನಾಗಲ್ಯಾಂಡ್ ರಾಜ್ಯಗಳ ಸ್ಪೀಕರ್ ಗಳ ಸಮಿತಿ ಇದಾಗಿದ್ದು, ಈಗಾಗಲೇ ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಸಮಿತಿ ಸಭೆ ನಡೆದಿದೆ ಎಂದರು.
ಚುನಾಯಿತ ಜನಪ್ರತಿನಿಧಿ ಪಕ್ಷಾಂತರ ಆದಾಗ ಅರ್ಹತೆ ಖಾತರಿಪಡಿಸುವುದು, ಪಕ್ಷದ ಜತೆಯಲ್ಲಿ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತದಲ್ಲಿ ಭಾಗವಹಿಸುವ ಅವಕಾಶ ನಿರಾಕರಿಸುವುದು, ಪಕ್ಷಾಂತರಗೊಂಡ ಶಾಸಕರಿಗೆ ಸಚಿವ ಸ್ಥಾನ ಅಥವಾ ನಿಗಮ, ಮಂಡಳಿಯಲ್ಲಿ ಸ್ಥಾನಮಾನ ನೀಡಬಾರದು ಎಂಬ ಕುರಿತ ಶಿಫಾರಸುಗಳ ಬಗ್ಗೆ ಚರ್ಚೆ ನಡೆದಿದೆ. ಅಂತಿಮ ಸಭೆಯನ್ನು ರಾಜ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಉತ್ತರ ಪ್ರದೇಶ ಸ್ಪೀಕರ್ ಅವರ ನೇತೃತ್ವದಲ್ಲಿ ವಿಧಾನ ಮಂಡಲದ ನಿಯಮ ಮತ್ತು ಪ್ರಕ್ರಿಯೆಗಳ ಕುರಿತಂತೆ ಹಿಮಾಚಲ ಪ್ರದೇಶ, ಸಿಕ್ಕಿಂ, ನವದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯವನ್ನು ಒಳಗೊಂಡ ಇನ್ನೊಂದು ಉನ್ನತ ಮಟ್ಟದ ಸಮಿತಿ ಸಭೆ ಮೇ 12, 13ರಂದು ಮೈಸೂರಿನಲ್ಲಿ ನಡೆಯಲಿದೆ ಎಂದರು.
ನನ್ನಿಂದ ಪ್ರಮಾಣವಚನ ಸ್ವೀಕಾರಕ್ಕೆ ವಿಳಂಬ ಆಗಿಲ್ಲ: ಸ್ವೀಕರ್ ಖಾದರ್
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಜೀವರಾಜ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ಸಾಂವಿಧಾನಿಕ ಹುದ್ದೆಯಲ್ಲಿರುವ ನನ್ನಿಂದ ಯಾವುದೇ ವಿಳಂಬ ಆಗಿಲ್ಲ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ವಿಶ್ವಾಸದಲ್ಲಿ ನಡೆಯಬೇಕು, ಆರೋಪದ ಮೂಲಕವಲ್ಲ ಎಂದು ಸ್ಪೀಕರ್ ಯು. ಟಿ. ಖಾದರ್ ಅವರು ತಿಳಿಸಿದರು.
ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. ನಿಯಮಾವಳಿ ಪ್ರಕಾರ ಅಭಿಪ್ರಾಯ ಪಡೆದು ಸಮಯ ನೀಡಲಾಗುತ್ತದೆ. ಆದರೆ ವಿಳಂಬ ಆಗಿದೆ ಎನ್ನುವುದು ಸರಿಯಾದ ಕ್ರಮವಲ್ಲ. ಸಂವಿಧಾನ ಮತ್ತು ಕಾನೂನಿನ ಅಡಿ ಅವಕಾಶ ನೀಡಬೇಕು. ಇದೊಂದು ವಿಶಿಷ್ಟ ಸನ್ನಿವೇಶ. ವಿಳಂಬ ಮಾಡುವ ಉದ್ದೇಶವೇ ಇಲ್ಲ. ಆದರೆ ಸಂವಿಧಾನ ಪೀಠದ ಬಗ್ಗೆ ಸಂಶಯ, ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ಚರ್ಚಿಸುವುದು, ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯಪಾಲರು ಕರೆ ಮಾಡಿ ಮಾತನಾಡಿದ್ದು, ವಿಳಂಬವಾಗಿಲ್ಲ ಎಂಬುದನ್ನು ಅವರಿಗೆ ಮಾಹಿತಿ ನೀಡಲಾಗಿದೆ ಎಂದರು.




