ಮಂಗಳೂರು: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್ಗೆ ಇಳಿಕೆ ಆಗುವ ಮೂಲಕ ನಗರದಲ್ಲಿ ಕೃತಕ ಜಲಕ್ಷಾಮ ಸೃಷ್ಟಿಸಲಾಗಿದೆ. ಕೂಡಲೇ ಎಎಂಆರ್ ಡ್ಯಾಂ ನಿಂದ ತುಂಬೆ ಡ್ಯಾಂ ಗೆ ನೀರು ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.
ತುಂಬೆ ಡ್ಯಾಂ ಗೆ ಅವರು ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರುಗಳು ಇದ್ದರೂ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತ ನೇತೃತ್ವದ ಪಾಲಿಕೆಯು ನೀರಿನ ರೇಷನಿಂಗ್ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ವಾಸ್ತವದಲ್ಲಿ ಆಪತ್ಕಾಲದ ಬಳಕೆಗೆ ಇರುವ ಎಎಂಆರ್ ಡ್ಯಾಮ್ ನಲ್ಲಿ ಸಾಕಷ್ಟು ನೀರಿದ್ದು ತುಂಬೆಗೆ ಹರಿಸಿ ನೀರಿನ ಮಟ್ಟ 6 ಮೀಟರ್ ವರೆಗೆ ಏರಿಸಿ ಜನರಿಗೆ ದಿನನಿತ್ಯ ನೀರು ಸರಬರಾಜು ಮಾಡಬಹುದು. ಇದನ್ನು ಬಿಜೆಪಿಯು ಹಿಂದಿನ ಪಾಲಿಕೆಯ ಆಡಳಿತದಲ್ಲಿ ಮಾಡಿ ತೋರಿಸಿರುವಾಗ, ಜನರನ್ನು ಹೀಗೆ ಭಯ ಭೀತಗೊಳಿಸುವುದು ಎಷ್ಟು ಸರಿ. ಎಎಂಆರ್ ಡ್ಯಾಮ್ ನಿಂದ ನೀರು ಬಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಮೇಯರ್ ಗಳಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಕಣ್ಣೂರುರವರು ಮಾತನಾಡಿ, ಖಂಡಿತ ನೀರಿನ ಸಮಸ್ಯೆ ಇಲ್ಲ. ಆಡಳಿತ ನಡೆಸುವವರು ಅನುಭವವಿಲ್ಲದೆ ಇಂತಹ ನಿರ್ಧಾರ ಕೈಗೊಂಡಂತಾಗಿದೆ. ಇನ್ನಿತರ ಬಳಕೆಗೆ ನೀರು ಬಳಸುವುದನ್ನು ತಡೆಯುವುದು ಬಿಟ್ಟು ಜನರ ಕುಡಿಯುವ ನೀರು ನಿಲ್ಲಿಸುವುದು ಎಷ್ಟು ಸರಿ? ನಗರದ ಹಲವೆಡೆ ನೀರೇ ಬರುತ್ತಿಲ್ಲ ಎಂಬ ಆರೋಪವಿದ್ದು 24 ಗಂಟೆ ಎಲ್ಲಾ ಮನೆಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ, ಭಾನುಮತಿ, ವೀಣಾಮಂಗಳ, ಲೀಲಾವತಿ ಪ್ರಕಾಶ್, ಜಯಲಕ್ಷ್ಮಿ ಶೆಟ್ಟಿ, ಸಂದೀಪ್ ಗರೋಡಿ, ಭರತ್ ಕುಮಾರ್, ಶೈಲೇಶ್ ಶೆಟ್ಟಿ, ಗಣೇಶ್ ಕುಲಾಲ್, ಶೋಭಾ ಪೂಜಾರಿ, ಕಿಶೋರ್ ಕೊಟ್ಟಾರಿ, ಮನೋಹರ್ ಶೆಟ್ಟಿ, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ಪಾಲಿಕೆಯ ಹಿರಿಯ ಅಧಿಕಾರಿಗಳಾದ ನರೇಶ್ ಶೆಣೈ, ಅಶ್ವಿನ್ ಇದ್ದರು.
What do you feel about this post?
Like
Love
Happy
Haha
Sad
