ಮಂಗಳೂರು: ನಗರದ ಕಪಿತಾನಿಯೊದಲ್ಲಿ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ‘ರೋಹನ್ ಸ್ಕ್ವೇರ್ ಬಸ್ ತಂಗುದಾಣ’ವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ನಗರದ ನಾಗರಿಕ ಮೂಲಸೌಕರ್ಯವನ್ನು ಬಲಪಡಿಸುವ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಸ್ ತಂಗುದಾಣ ನಿರ್ಮಿಸಲಾಗಿದೆ.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಜನರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವ ಕೆಲಸವೇ ನಿಜವಾದ ಸೇವೆ. ಸಾರ್ವಜನಿಕರ ದೈನಂದಿನ ಪ್ರಯಾಣಕ್ಕೆ ಅನುಕೂಲ ಆಗುವಂತೆ ರೋಹನ್ ಕಾರ್ಪೊರೇಶನ್ ಕೈಗೊಂಡಿರುವ ಕಾರ್ಯ ಶ್ಲಾಘನೀಯ’ ಎಂದರು.
ಕಾರ್ಪೊರೇಟರ್ ಸಂದೀಪ್ ಗರೋಡಿ ಮಾತನಾಡಿ, ‘ನಗರದ ಅಭಿವೃದ್ಧಿಯೊಂದಿಗೆ ಜನಜೀವನಕ್ಕೆ ಉಪಯೋಗವಾಗುವ ಕಾರ್ಯಗಳಿಗೆ ಸಂಸ್ಥೆ ಆದ್ಯತೆ ನೀಡುತ್ತಿರುವುದು ಅಭಿನಂದನಾರ್ಹ’ ಎಂದು ಹೇಳಿದರು.
ರೋಹನ್ ಕಾರ್ಪೊರೇಶನ್ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೊ ಮಾತನಾಡಿ, ‘ನಮ್ಮ ಜವಾಬ್ದಾರಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾರ್ವಜನಿಕರ ದೈನಂದಿನ ಬದುಕಿಗೆ ಅನುಕೂಲವಾಗುವ ಕಾರ್ಯಗಳ ಮೂಲಕ ನಗರಕ್ಕೆ ಕೊಡುಗೆ ನೀಡುವುದು ನಮ್ಮ ಬದ್ಧತೆ. ಬಸ್ ತಂಗುದಾಣ ನಿರ್ಮಾಣ ಆ ನಿಟ್ಟಿನಲ್ಲಿ ಅರ್ಥಪೂರ್ಣ ಹೆಜ್ಜೆ’ ಎಂದರು.
ನಿರ್ದೇಶಕ ಡಿಯೋನ್ ಮೊಂತೆರೊ, ರೋಹನ್ ಕಾರ್ಪೊರೇಶನ್ನ ಪ್ರಧಾನ ವ್ಯವಸ್ಥಾಪಕಿ ಸುಮನಾ, ಜೇಮ್ಸ್ ಸೇರಿದಂತೆ ಹಲವರು ಇದ್ದರು. ಸೌಜನ್ಯ ಹೆಗ್ಡೆ ನಿರೂಪಿಸಿದರು.
What do you feel about this post?
Like
Love
Happy
Haha
Sad





