ಮಂಗಳೂರು: ರಾಜ್ಯದ ಹೊರ ಜಿಲ್ಲೆಗಳಿಂದ ತುರ್ತು ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಯು ಹಾಸಿಗೆ ಕೊರತೆ ಕಾಡುತ್ತಿದೆ. ಪರಿಣಾಮ ಒತ್ತಡ ಹೆಚ್ಚಿದ್ದು, ರೋಗಿಗಳನ್ನು ಶಿಫಾರಸು ಮಾಡುವ ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆ ಪರಿಶೀಲಿಸುವ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಇದಕ್ಕಾಗಿ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಗಳ ರೋಗಿಗಳನ್ನು ಏಕಾಏಕಿ ಕರೆತರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾಕಷ್ಟು ಅರ್ಹ ಬಡ ರೋಗಿಗಳಿಗೆ ವೆನ್ಲಾಕ್ ಆಸ್ಪತ್ರೆಯ ಲಾಭ ಸಿಗದೇ ಇರುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ. ಎಸ್. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 116 ಐಸಿಯು ಹಾಸಿಗೆಗಳು ಇದ್ದರೂ ತೀವ್ರ ನಿಗಾ ಘಟಕಗಳು ಬಹುತೇಕ ಹಾಸಿಗೆ ಅಲಭ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿಯೂ ಯಾವುದೇ ಪೂರ್ವ ಮಾಹಿತಿ ಪಡೆಯದೇ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಹೊರ ಜಿಲ್ಲೆಗಳ ಆಸ್ಪತ್ರೆಗಳಿಂದ ಕಳುಹಿಸಲಾಗುತ್ತಿದೆ. ಇದರಿಂದ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ಸಮಸ್ಯೆಗೆ ಪರಿಹಾರವಾಗಿ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ವ್ಯವಸ್ಥೆ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ವೆಬ್ಸೈಟ್ ಹಾಗೂ ಆನ್ಲೈನ್ ವ್ಯವಸ್ಥೆಯ ಮೂಲಕ ಐಸಿಯು ಹಾಸಿಗೆಗಳ ಲಭ್ಯತೆ ಮತ್ತು ಭರ್ತಿಯ ಸ್ಥಿತಿಯನ್ನು ಸಾರ್ವಜನಿಕರು ಹಾಗೂ ಆಸ್ಪತ್ರೆಗಳು ತಕ್ಷಣವೇ ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕೇರಳ ಸೇರಿದಂತೆ ರಾಜ್ಯದ 31 ಜಿಲ್ಲೆಗಳ ಆಸ್ಪತ್ರೆಗಳಿಂದ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆ ಅಡಿ ತುರ್ತು ಹಾಗೂ ವಿವಿಧ ಚಿಕಿತ್ಸೆಗಳಿಗಾಗಿ ವೆನ್ಲಾಕ್ ಆಸ್ಪತ್ರೆಗೆ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲಾ ಆಸ್ಪತ್ರೆಯಿಂದ ಮತ್ತೊಂದು ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವಾಗ ಅನುಸರಿಸಬೇಕಾದ ಸಮಗ್ರ ಮಾರ್ಗಸೂಚಿ ಜಾರಿಗೊಳಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಗೆ ಹೆಚ್ಚುವರಿ 50 ವೆಂಟಿಲೇಟರ್ ಹಾಸಿಗೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 21 ಮೆಡಿಕಲ್ ಐಸಿಯು, 27 ಸರ್ಜಿಕಲ್ ಐಸಿಯು ಸೇರಿದಂತೆ ಒಟ್ಟು 116 ಐಸಿಯು ಹಾಸಿಗೆಗಳು ಲಭ್ಯವಿವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಹೊರ ಜಿಲ್ಲೆಗಳಿಂದ ರೋಗಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸುವುದರಿಂದ ಸ್ಥಳೀಯವಾಗಿ ಬಡ ಅರ್ಹ ರೋಗಿಗಗಳಿಗೆ ಸೌಲಭ್ಯ ಸಿಗದೇ ಇರುವಂತಹ ಸ್ಥಿತಿ ಇದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ಮಾತನಾಡಿ, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ರೋಗಿಗಳ ಶಿಫಾರಸು ಮಾಡುವ ಏಕೀಕೃತ ವ್ಯವಸ್ಥೆಯನ್ನು ರಾಜ್ಯ ಮಟ್ಟದಲ್ಲೇ ಜಾರಿಗೊಳಿಸುವ ಅಗತ್ಯ ಇದೆ. ವೆನ್ಲಾಕ್ ಆಸ್ಪತ್ರೆಗೆ ರೋಗಿಗಳನ್ನು ಶಿಫಾರಸ್ಸು ಮಾಡುವ ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಇದಕ್ಕಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಸಹಾಯವಾಣಿ ಆರಂಭಿಸಲಾಗಿದೆ. ಸರಕಾರದ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಗಳಿಂದ ಯಾವುದೇ ಕಾರಣಕ್ಕೂ ನೋಂದಾಯಿತ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚವನ್ನು ಯಾವುದೇ ಕಾರಣಕ್ಕೂ ಪಡೆಯುವಂತಿಲ್ಲ ಎಂದರು.
ತುರ್ತು ಸೇವೆಗೆ ಲಭ್ಯತೆ ವಿಚಾರಿಸಿ ರೋಗಿಗಳ ಶಿಫಾರಸು ಮಾಡಿ: ಡಾ. ತಿಮ್ಮಯ್ಯ
ಈಗಾಗಲೇ ವೆನ್ಲಾಕ್ ಆಸ್ಪತ್ರೆಯ ಕ್ಯಾಥ್ ಲ್ಯಾಬ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಗಳಿಂದ ತುರ್ತು ಸೇವೆಗೆ ಯಾವುದೇ ವಿಚಾರಣೆ ಮಾಡದೇ ರೋಗಿಗಳನ್ನು ಕರೆದುಕೊಂಡು ಬರುವ ಪರಿಪಾಠ ಹೆಚ್ಚಾಗಿದೆ. ಆದರೆ ಗುಣಮಟ್ಟದ ಚಿಕಿತ್ಸೆ ರೋಗಿಗಳಿಗೆ ಸಿಗಬೇಕಾದರೆ ಮೊದಲ ಸೇವೆಯ ಲಭ್ಯತೆಯನ್ನು ತಿಳಿದುಕೊಂಡು ರೋಗಿಗಳನ್ನು ಆಸ್ಪತ್ರೆಗೆ ಕರೆತರುವುದು ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಅವರು ತಿಳಿಸಿದರು.
ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಂಪರ್ಕಕ್ಕೆ
+91 7483035127
ಸಹಾಯ ಕೇಂದ್ರ
+91 8217662885
ಪಿಆರ್ಒ ನಿಕೇಶ್, ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ಬ್ಲಾಕ್
+91 9945927253
ಸುಮಂತ್ ಕೋಡಿಕಲ್, ಪಿಆರ್ಒ ಒಪಿಡಿ ಬ್ಲಾಕ್ ಮತ್ತು ಪ್ರಮಾಣಪತ್ರಗಳು
9167607879
ಧನರಾಜ್, ಪಿಆರ್ಒ, ಆಡಳಿತ ಬ್ಲಾಕ್ ಮತ್ತು ಮಕ್ಕಳ ಆಸ್ಪತ್ರೆ
What do you feel about this post?
Like
Love
Happy
Haha
Sad



