ಮಂಗಳೂರು: ಮಾತಾ ಅಮೃತಾನಂದಮಯಿ ದೇವಿ ಅವರು ಕರ್ನಾಟಕ–ಕೇರಳ ಯಾತ್ರೆಯ ಅಂಗವಾಗಿ ಮಂಗಳೂರಿಗೆ ಮಂಗಳವಾರ ಆಗಮಿಸಿದ್ದಾರೆ. ಮೇ 28 ಮತ್ತು 29 ರಂದು ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆವ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಅಮ್ಮ ಭಾಗವಹಿಸಲಿದ್ದಾರೆ.
ಏಳು ವರ್ಷಗಳ ಬಳಿಕ ಅಮ್ಮ ಮಂಗಳೂರಿಗೆ ಭೇಟಿ ನೀಡಿದ್ದು, ಮಾತಾ ಅಮೃತಾನಂದಮಯಿ ಮಠದಲ್ಲಿ ಭಕ್ತರು ಹಾಗೂ ಆಶ್ರಮದ ಪ್ರತಿನಿಧಿಗಳು ವೇದಘೋಷ ಮತ್ತು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೋರಿದರು. ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ನೇತೃತ್ವದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು.
ಅಮೃತಪುರಿ ಆಶ್ರಮದ ಹಿರಿಯ ಸನ್ಯಾಸಿ ಶಿಷ್ಯರು, ಬ್ರಹ್ಮಚಾರಿಗಳು, ಬ್ರಹ್ಮಚಾರಿಣಿಯರು ಹಾಗೂ ಆಶ್ರಮ ನಿವಾಸಿಗಳು ಅಮ್ಮ ಅವರನ್ನು ಮಂಗಳೂರಿಗೆ ಆಗಮಿಸಿದರು.
ಬ್ರಹ್ಮಸ್ಥಾನ ಮಹೋತ್ಸವವು ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ. ಮೇ 28 ರಂದು ಬೆಳಿಗ್ಗೆ 11 ಗಂಟೆಗೆ ವಿಶೇಷವಾಗಿ ಸಿದ್ಧಪಡಿಸಿರುವ ವೇದಿಕೆಗೆ ಅಮ್ಮ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧ್ಯಾನ, ಸತ್ಸಂಗ, ಭಜನೆ ಹಾಗೂ ದರ್ಶನ ನಡೆಯಲಿದೆ.
ಎರಡು ದಿನಗಳ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರಿಗಾಗಿ ಆಶ್ರಮ ಹಾಗೂ ಬ್ರಹ್ಮಸ್ಥಾನ ಪರಿಸರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ.
What do you feel about this post?
Like
Love
Happy
Haha
Sad
