ಬೆಂಗಳೂರು: ಡಿ.ಕೆ ಶಿವಕುಮಾರ್ ಅವರು ಸಿಎಲ್ ಪಿ ನಾಯಕನಾಗಿ ಆಯ್ಕೆ ಆಗುತ್ತಿದ್ದಂತೆ ಮಂತ್ರಿ ಮಂಡಳ ಸೇರುವುದಕ್ಕೆ ಶಾಸಕರು ದೆಹಲಿ ಮಟ್ಟದಲ್ಲಿ ಬಿಡು ಬಿಟ್ಟಿದ್ದು, ಒತ್ತಡ ಹಾಕುವುದಕ್ಕೆ ಮುಂದಾಗಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜೂನ್ 3 ರಂದು ಮಧ್ಯಾಹ್ನ 3.30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಮುಖ್ಯಮಂತ್ರಿ ಜತೆಗೆ 14 ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಇನ್ನು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಿಂದ ಶಾಸಕರು ಮಂತ್ರಿ ಆಗುವ ಲಿಸ್ಟ್ ನಲ್ಲಿ ಇದ್ದಾರೆ. ಶಾಸಕ ಯು.ಟಿ. ಖಾದರ್ ಅವರು ಬಹುತೇಕ ಮಂತ್ರಿ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಚುನಾವಣೆ ದೃಷ್ಟಿಯಿಂದ ಹಿರಿಯರು ಮತ್ತು ಹೊಸಬರ ಸಮ್ಮಿಳಿತ ಸಂಪುಟ ರಚನೆಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತದಲ್ಲಿ ಪ್ರಮಾಣ ಸ್ವೀಕರಿಸುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕೆ.ಜೆ ಜಾರ್ಜ್, ಡಾ. ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ್, ರೂಪಾ ಶಶಿಧರ್ (ಮುನಿಯಪ್ಪ ಪುತ್ರಿ), ಸತೀಶ್ ಜಾರಕಿಹೋಳಿ, ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ಆರ್. ಚಲುವರಾಯಸ್ವಾಮಿ, ಬೈರತಿ ಸುರೇಶ್, ಯು.ಟಿ. ಖಾದರ್, ಕೃಷ್ಣ ಬೈರೇಗೌಡ ಮತ್ತು ಎನ್.ಎ. ಹ್ಯಾರಿಸ್ ಸ್ಥಾನ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ.
ಇನ್ನು ಕೆಲ ಹಿರಿಯರನ್ನು ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ಪಕ್ಷದ ಹೈಕಮಾಂಡ್ ನಲ್ಲಿ ಚರ್ಚೆ ಆಗಿದೆ. ಎಚ್.ಕೆ ಪಾಟೀಲ್, ಶಿವಾನಂದ ಪಾಟೀಲ್, ಕೆ.ಎಚ್ ಮುನಿಯಪ್ಪ, ಆರ್.ಬಿ ತಿಮ್ಮಾಪುರ್ ಸೇರಿದಂತೆ ಕೆಲವು ಹಿರಿಯರನ್ನು ಕೈಬಿಡುವ ಸಾಧ್ಯತೆ ಇದೆ. ಕಾನೂನು ಸಚಿವರಾಗಿದ್ದ ಎಚ್.ಕೆ ಪಾಟೀಲ್ ಸ್ಪೀಕರ್ ಆಗುವ ಸಾಧ್ಯತೆ ಇದೆ. ಸ್ಪೀಕರ್ ಆಗಿದ್ದ ಯು.ಟಿ ಖಾದರ್ ಸಚಿವರಾಗಲಿದ್ದಾರೆ.
What do you feel about this post?
Like
Love
Happy
Haha
Sad
