ಮಂಗಳೂರು: ಮಕ್ಕಳಲ್ಲಿ ಪ್ರಕೃತಿ, ಸಕಲ ಜೀವಿಗಳು ಹಾಗೂ ಮಾನವ ಸಮುದಾಯದೊಂದಿಗೆ ಸಹಬಾಳ್ವೆ ನಡೆಸುವ ಮನೋಭಾವ ಬೆಳೆಸಬೇಕು ಎಂದು ಮಾತಾ ಅಮೃತಾನಂದಮಯಿ ದೇವಿ ಅವರು ಹೇಳಿದರು.
ಮಂಗಳೂರಿನ ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿ, ಮಾನವರು ಪರಸ್ಪರ ಸಹಕಾರದಿಂದ ಬದುಕುವುದನ್ನು ಕಲಿಯಬೇಕು. ಜತೆಗೆ ಪ್ರಕೃತಿಯೊಂದಿಗೆ ಸ್ನೇಹಭಾವ ಮತ್ತು ದೇವರೊಂದಿಗೆ ಆಧ್ಯಾತ್ಮಿಕ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದರು.

ಕೋವಿಡ್ ಮಹಾಮಾರಿ, ಪ್ರಕೃತಿ ವಿಕೋಪಗಳು ಹಾಗೂ ಹವಾಮಾನ ಬದಲಾವಣೆಗಳು ಮಾನವಕುಲವು ಪ್ರಕೃತಿಯೊಂದಿಗಿನ ತನ್ನ ಸಂಬಂಧವನ್ನು ಮರು ಪರಿಶೀಲಿಸಬೇಕೆಂಬ ಎಚ್ಚರಿಕೆ ಆಗಿದೆ. ಮಾನವರು, ಸಮುದಾಯಗಳು ಹಾಗೂ ರಾಷ್ಟ್ರಗಳ ನಡುವಿನ ಸಂಘರ್ಷಗಳಿಗೆ ಮಾತುಕತೆ ಮತ್ತು ರಾಜಿ ಪರಿಹಾರವಾಗಬಹುದು. ಆದರೆ ಪ್ರಕೃತಿಯೊಂದಿಗೆ ಅದು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಮ್ಮನ ಸೇವೆ ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಭಕ್ತರ ಉದ್ದಾರ ಮಾಡಲಾಗುತ್ತಿದೆ ಎಂದರು.
ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ, ಆಧ್ಯಾತ್ಮಿಕ ಶಕ್ತಿ ಶಾಶ್ವತ ಮೌಲ್ಯ ಹೊಂದಿದ್ದು, ಸಾರ್ವಜನಿಕ ಜೀವನದಲ್ಲಿರುವವರಿಗೆ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಇಂತಹ ಮಹಾ ಸೇವೆಗಳು ಸಾಕ್ಷಿ ಆಗಿವೆ ಎಂದರು.
ಇದೇ ವೇಳೆ ವಿಶೇಷ ಪೂಜೆ, ದರ್ಶನ, ಸ್ವಯಂಸೇವಕರ ಸೇವಾ ಚಟುವಟಿಕೆಗಳು, ಉಚಿತ ವೈದ್ಯಕೀಯ ಶಿಬಿರ ಹಾಗೂ ಅನ್ನದಾನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಆಗಮಿಸಿದ ಭಕ್ತರಿಗೆ ಒದಗಿಸಲಾಯಿತು.
ಸ್ವಾಮಿ ಜಿತಕಾಮಾನಂದ, ಶಾಸಕ ಯಶ್ಪಾಲ್ ಸುರ್ವಣ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗೂ ಜೆ. ಕೃಷ್ಣ ಪಾಲೇಮಾರ್, ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್, ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಕುಮಾರ್ ಆಳ್ವ, ಪ್ರಕಾಶ್ ಪೈ. ಪೆರಾಜೆ , ಸುರೇಶ್ ಅಮೀನ್, ಡಾ. ದೇವದಾಸ್ ಪುತ್ರನ್ ಇದ್ದರು.
ಮುಖ್ಯಾಂಶಗಳು
– ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳಿಗೆ ನೆರವು
– ಅಮೃತಶ್ರೀ ಸ್ವಸಹಾಯ ಸಂಘಗಳ 1,200 ಸದಸ್ಯರಿಗೆ ಆರ್ಥಿಕ ಸಹಾಯ
– ಸಮುದ್ರ ಸಸ್ಯ ಬೆಳೆ ಯೋಜನೆಗೆ ಚಾಲನೆ
– ಆಯುಧ್ ಮಂಗಳೂರು ವತಿಯಿಂದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ
ಪ್ರಕೃತಿಯ ಎದುರು ಅಹಂಕಾರ ತೊರೆದು ವಿನಮ್ರತೆ, ಗೌರವ ಹಾಗೂ ಸ್ನೇಹಭಾವದಿಂದ ವರ್ತಿಸುವುದೇ ಸೂಕ್ತ ಮಾರ್ಗ, ಭೂಮಿ, ಅದರ ಸಂಪನ್ಮೂಲಗಳು ಹಾಗೂ ಸಮೃದ್ಧಿಯನ್ನು ಇತರ ಜೀವಿಗಳೊಂದಿಗೆ ಹಂಚಿಕೊಳ್ಳುವ ಮನೋಭಾವವೇ ನಿಜವಾದ ಸಹಬಾಳ್ವೆ.
– ಮಾತಾ ಅಮೃತಾನಂದಮಯಿ ದೇವಿ
What do you feel about this post?
Like
Love
Happy
Haha
Sad
