ಮಂಗಳೂರು: ಜೆಡಿಎಸ್ ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಘಟನಾ ಸಭೆಯು ಕ್ಷೇತ್ರಾಧ್ಯಕ್ಷ ಎನ್.ಪಿ. ಪುಷ್ಪರಾಜನ್ ಅವರ ಅಧ್ಯಕ್ಷತೆಯಲ್ಲಿ ನಗರದ ವುಡ್ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಮತ್ತಷ್ಟು ಸದೃಢಗೊಳಿಸುವುದು, ಸದಸ್ಯತ್ವ ಅಭಿಯಾನವನ್ನು ತೀವ್ರಗೊಳಿಸುವುದು ಹಾಗೂ ಮುಂಬರುವ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಯಿತು.
ಕ್ಷೇತ್ರ ಕಾರ್ಯಾಧ್ಯಕ್ಷ ವಸಂತ ಪೂಜಾರಿ ಮಾತನಾಡಿ, ಜೆಡಿಎಸ್ನ ತತ್ವ-ಸಿದ್ಧಾಂತಗಳು, ರೈತಪರ ಹಾಗೂ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಅವರು ಸಮಾಜಮುಖಿ ಚಿಂತನೆ ಹೊಂದಿರುವವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಸಂಘಟನೆಯನ್ನು ವಿಸ್ತರಿಸಬೇಕು ಎಂದರು.
ಕಾರ್ಯಾಧ್ಯಕ್ಷ ಇಕ್ಬಾಲ್ ಮೂಲ್ಕಿ ಅವರು ಪಡಿತರ ವಿತರಣೆಯಲ್ಲಿನ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ, ಅವುಗಳ ಪರಿಹಾರಕ್ಕಾಗಿ ಪಕ್ಷ ಹೋರಾಟ ನಡೆಸಬೇಕೆಂದರು. ಕಾರ್ಯಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಅವರು ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸುವ ಅಗತ್ಯ ಇದೆ ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಷಾ ಜಾಮೀರ್ ಅವರು ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದೊಂದಿಗೆ ಕೈಜೋಡಿಸಬೇಕು ಎಂದರು.
ಸುಮತಿ ಹೆಗ್ಡೆ ಅವರ ನೇತೃತ್ವದಲ್ಲಿ ಜಯಲಕ್ಷ್ಮಿ ಶೆಟ್ಟಿ, ಸರೋಜಿನಿ ಶೆಟ್ಟಿ, ಕೀರ್ತಿ, ವಿಮಲ, ವೃಂದಾ ಎನ್. ಪ್ರಭು ಹಾಗೂ ತನುಜ ಕೃಷ್ಣ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸಭೆಯಲ್ಲಿ ಜೆಡಿಎಸ್ ಮೀನುಗಾರ ಘಟಕದ ರಾಜ್ಯ ಘಟಕದ ಅಧ್ಯಕ್ಷ ರತ್ನಾಕರ್ ಸುವರ್ಣ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಮೀಜಾ ನಾಸೀರ್, ಮಾಜಿ ಕಾರ್ಪೊರೇಟರ್ ಅಜೀಜ್ ಕುದ್ರೋಳಿ, ಪ್ರಿಯಾ ಸಾಲಿಯಾನ್, ಭಾರತಿ ಪುಷ್ಪರಾಜನ್, ಚೂಡಾಮಣಿ ಶಾರದ ಶೆಟ್ಟಿ, ಜ್ಯೋತಿ ಜೈನ್, ವೀಣಾ ಶೆಟ್ಟಿ, ರತೀಶ್ ಕರ್ಕೇರ, ನಾಗೇಶ್ ಬಲ್ಮಠ, ಹಿತೇಶ್ ರೈ, ಪ್ರಶಾಂತ್ ಭಟ್ ಕಡಬ, ಮುನೀರ್ ಮುಕ್ಕಚೇರಿ, ಪ್ರಾನ್ಸಿಸ್ ಫೆರ್ನಾಂಡಿಸ್, ಕನಕದಾಸ್, ವಿನ್ಸೆಂಟ್, ಲತೀಫ್ ಬೆಂಗ್ರೆ, ಜಾವೀದ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
What do you feel about this post?
Like
Love
Happy
Haha
Sad
