ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ಶಾಖೆ ಹಾಗೂ ನೂತನ ಎಟಿಎಂ ಅನ್ನು ಭಾನುವಾರ ದೇರಳಕಟ್ಟೆಯ ಫಾ. ಮುಲ್ಲರ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟಿಸಿತು. ಸಹಕಾರ ರತ್ನ ಹಾಗೂ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ನೂತನ ಶಾಖೆಯನ್ನು ಉದ್ಘಾಟಿಸಿದರೆ, ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ನಿಲೇಶ್ ಕ್ರಾಸ್ತಾ ಎಟಿಎಂಗೆ ಚಾಲನೆ ನೀಡಿದರು.
ಉರ್ಸುಲಿನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್ನ ಸುಪೀರಿಯರ್ ಜನರಲ್ ಸಿ. ಮಿಲ್ಲಿ ಫೆರ್ನಾಂಡಿಸ್ ಸೇಫ್ ರೂಂ ಉದ್ಘಾಟಿಸಿದರೆ, ಫಾ. ನೆಲ್ಸನ್ ದೀರಜ್ ಪಾಯ್ಸ್ ಇ-ಸ್ಟಾಂಪ್ ಸೇವೆಗೆ ಚಾಲನೆ ನೀಡಿದರು. ಪಾಣೀರ್ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ಫಾ. ವಿಕ್ಟರ್ ಡಿ’ಮೆಲ್ಲೊ ನೂತನ ಶಾಖೆಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನಿಲ್ ಲೋಬೊ, ಗ್ರಾಹಕ ಸೇವೆ ಮತ್ತು ಸಹಕಾರ ಬ್ಯಾಂಕಿಂಗ್ಗೆ ಎಂಸಿಸಿ ಬ್ಯಾಂಕ್ ಬದ್ಧವಾಗಿದ್ದು, ದೇರಳಕಟ್ಟೆ ಶಾಖೆ ಜನರ ವಿಶ್ವಾಸದೊಂದಿಗೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಆರ್ಬಿಐ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ನಲ್ಲಿ ಅರ್ಹ ಠೇವಣಿಗಳಿಗೆ ಡಿಐಸಿಜಿಸಿ ವಿಮಾ ರಕ್ಷಣೆ ಲಭ್ಯವಿದ್ದು, ಗ್ರಾಹಕರು ಆತಂಕವಿಲ್ಲದೆ ವ್ಯವಹರಿಸಬಹುದು ಎಂದು ತಿಳಿಸಿದರು.
ಪ್ರಸ್ತುತ ಆಡಳಿತಾವಧಿಯಲ್ಲಿ ಆರಂಭಿಸಲಾದ ಐದು ಹೊಸ ಶಾಖೆಗಳು ಮೊದಲ ವರ್ಷದಲ್ಲೇ ತಲಾ 10 ಕೋಟಿ ವ್ಯವಹಾರ ಸಾಧಿಸಿರುವುದು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿಯ ಪರಿಶ್ರಮದ ಫಲವಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸುವ ಯೋಜನೆ ಇರುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಿ. ಮಿಲ್ಲಿ ಫರ್ನಾಂಡಿಸ್, ಎಂಸಿಸಿ ಬ್ಯಾಂಕ್ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಉಳಿತಾಯ ಮತ್ತು ಸಾಲ ಸೌಲಭ್ಯಗಳ ಮೂಲಕ ಜನರ ಆರ್ಥಿಕ ಭದ್ರತೆಗೆ ನೆರವಾಗುತ್ತಿದೆ ಎಂದು ಶ್ಲಾಘಿಸಿದರು.
ಫಾ. ನಿಲೇಶ್ ಕ್ರಾಸ್ತಾ ಮಾತನಾಡಿ, ಫಾ. ಮುಲ್ಲರ್ ಸಂಸ್ಥೆಗಳು ಮತ್ತು ಎಂಸಿಸಿ ಬ್ಯಾಂಕ್ ಎರಡೂ ಸೇವೆ, ವಿಶ್ವಾಸ ಹಾಗೂ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಬೆಳೆದ ಸಂಸ್ಥೆಗಳಾಗಿದ್ದು, ದೇರಳಕಟ್ಟೆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬ್ಯಾಂಕ್ ಪ್ರಮುಖ ಪಾತ್ರ ವಹಿಸಲಿ ಎಂದು ಹಾರೈಸಿದರು.
ಫಾದರ್ ವಿಕ್ಟರ್ ಡಿ’ಮೆಲ್ಲೊ, ಬ್ಯಾಂಕ್ ಸಿಬ್ಬಂದಿ ಪ್ರತಿಯೊಬ್ಬ ಗ್ರಾಹಕರನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು. “ಜನಸೇವೆ ಎಂದರೆ ದೇವರ ಸೇವೆ” ಎಂಬ ಸಂದೇಶದೊಂದಿಗೆ ಪ್ರಾಮಾಣಿಕ ಹಾಗೂ ಕರುಣೆಯ ಸೇವೆಗೆ ಕರೆ ನೀಡಿದರು.
ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ನೂತನ ಶಾಖೆ ಉದ್ಘಾಟನೆಗೆ ಅಭಿನಂದನೆ ಸಲ್ಲಿಸಿ, ಮಂಗಳೂರು ಹಾಗೂ ಸುತ್ತಮುತ್ತ ಇನ್ನಷ್ಟು ಶಾಖೆಗಳನ್ನು ಆರಂಭಿಸುವ ಮೂಲಕ ಬ್ಯಾಂಕ್ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.
ಸಮುದಾಯ ಸೇವೆಯ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಎಂಸಿಸಿ ಬ್ಯಾಂಕ್ ಸನ್ಮಾನಿಸಿತು. ಅಲ್ಲದೆ ಉರ್ಸುಲಿನ್ ಸಿಸ್ಟರ್ಸ್ ವಿಶೇಷ ಚೇತನ ಮಕ್ಕಳ ಶಾಲೆಗೆ 1 ಲಕ್ಷ, ಪ್ರಿನ್ಸಿತಾ ಡಿಸೋಜ ಅವರ ವಿದ್ಯಾಭ್ಯಾಸಕ್ಕೆ 25 ಸಾವಿರ, ಮರ್ಸಿ ಕೇರ್ ಚಾರಿಟಬಲ್ ಟ್ರಸ್ಟ್ಗೆ 50 ಸಾವಿರ ಹಾಗೂ ಓಲವಿನಹಳ್ಳಿ ಆಶ್ರಮಕ್ಕೆ 1 ಲಕ್ಷ ಧನಸಹಾಯ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವಾ, ಮಹಾಪ್ರಬಂಧಕ ಸುನಿಲ್ ಮೆನೇಜಸ್, ಆಡಳಿತ ಮಂಡಳಿಯ ನಿರ್ದೇಶಕರು, ಗಣ್ಯ ಅತಿಥಿಗಳು ಹಾಗೂ ಸ್ಥಳೀಯರು ಇದ್ದರು. ನಿರ್ದೇಶಕ ರೋಶನ್ ಡಿ’ಸೋಜ ಸ್ವಾಗತಿಸಿದರು. ಶೈನಿ ವೀಭಾ ಡಿಸೋಜ ನಿರೂಪಿಸಿದರು, ನೂತನ ಶಾಖೆಯ ವ್ಯವಸ್ಥಾಪಕಿ ಜೂಲಿಯೆಟ್ ಡಿಸೋಜ ವಂದಿಸಿದರು.
What do you feel about this post?
Like
Love
Happy
Haha
Sad



