ಮಂಗಳೂರು: ಮೊಳಹಳ್ಳಿ ಶಿವರಾವ್ ಅವರು ತಮ್ಮ ಇಡೀ ಜೀವನವನ್ನು ಸಹಕಾರಿ ಚಳವಳಿಯ ಅಭಿವೃದ್ಧಿಗೆ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ. ಅವರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಮೌಲ್ಯಗಳನ್ನು ಅನುಸರಿಸುತ್ತಲೇ ಸಹಕಾರಿ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ, ಸಹಕಾರಿ ಕ್ಷೇತ್ರಕ್ಕೆ ದಿಕ್ಸೂಚಿ ಹಾಕಿಕೊಟ್ಟ ಮಹಾನ್ ವ್ಯಕ್ತಿ ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೇಳಿದರು.
ಸಹಕಾರಿ ಪಿತಾಮಹ’ ಮೊಳಹಳ್ಳಿ ಶಿವರಾವ್ ಅವರ 146 ನೇ ಜನ್ಮದಿನದ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಸ್ವರೂಪವನ್ನು ನೀಡಿದವರು ಮೊಳಹಳ್ಳಿ ಶಿವರಾವ್ ಅವರು, ಅವರು ಸಲ್ಲಿಸಿದ ಅಪೂರ್ವ ಸೇವೆ, ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಸಹಕಾರಿ ತತ್ವಗಳ ಮಹತ್ವವನ್ನು ಎಂದಿಗೂ ಮರೆಯಲಾಗದು. ಸಹಕಾರಿ ಕ್ಷೇತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವಾಣಿಜ್ಯ ಕ್ಷೇತ್ರಕ್ಕೆ ಸಹಕಾರಿ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಸಹಕಾರಿ ಸಂಸ್ಥೆಗಳ ಒಗ್ಗಟ್ಟು, ಸದಸ್ಯರ ವಿಶ್ವಾಸ ಹಾಗೂ ಸಮರ್ಪಿತ ಸೇವಾ ಮನೋಭಾವದಿಂದ ರಾಜ್ಯದ ಸಹಕಾರಿ ವ್ಯವಸ್ಥೆ ಮಾದರಿ ಆಗಿದೆ. ಮೊಳಹಳ್ಳಿ ಶಿವರಾವ್ ಅವರ ಆದರ್ಶಗಳು ಇಂದಿಗೂ ಸಹಕಾರಿ ಕ್ಷೇತ್ರಕ್ಕೆ ದಾರಿದೀಪ. ಕಾರ್ಯಕ್ರಮವು ಸಹಕಾರಿ ಚಳವಳಿಯ ಇತಿಹಾಸ, ಅದರ ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ಸಹಕಾರಿ ಮೌಲ್ಯಗಳನ್ನು ತಲುಪಿಸುವ ಅಗತ್ಯವನ್ನು ಒತ್ತಿ ಹೇಳುವ ವೇದಿಕೆ ಆಗಿದೆ ಎಂದರು.

ಸಾಹಿತಿ ಅರವಿಂದ ಚೊಕ್ಕಾಡಿ ಅವರು ರಚಿಸಿರುವ ಮೊಳಹಳ್ಳಿ ಶಿವರಾವ್ ಅವರ ಆಕರ ಗ್ರಂಥವನ್ನು ಗಣ್ಯರು ಬಿಡುಗಡೆಗೊಳಿಸಿದರು. ಗ್ರಂಥವು ಮೊಳಹಳ್ಳಿ ಶಿವರಾವ್ ಅವರ ಜೀವನ, ಸಹಕಾರಿ ಚಳವಳಿಗೆ ನೀಡಿದ ಕೊಡುಗೆ ಹಾಗೂ ಅವರ ವಿಚಾರಧಾರೆಯನ್ನು ದಾಖಲಿಸಿರುವ ಮಹತ್ವದ ಕೃತಿಯಾಗಿದೆ ಎಂದು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್ ಭಟ್, ಬ್ಯಾಂಕ್ ನಿರ್ದೇಶಕರು, ವಿವಿಧ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಇದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಳ್ಯೊಟ್ಟು ಅವರು ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.
What do you feel about this post?
Like
Love
Happy
Haha
Sad





