ಮಂಗಳೂರು: ಕುಟುಂಬದ ಸೌಖ್ಯ, ಪಾರಂಪರಿಕ ಮೌಲ್ಯಗಳು ಹಾಗೂ ಆಧುನಿಕ ಚಿಂತನೆಗಳನ್ನು ಸಮನ್ವಯಗೊಳಿಸಿ ಕೌಟುಂಬಿಕ ಜವಾಬ್ದಾರಿಯ ಅರಿವು ಮೂಡಿಸುವ ಮಹತ್ವದ ಕೃತಿ ವಿಜಯಲಕ್ಷ್ಮೀ ಪಿ. ರೈ ಅವರ ‘ಭಾವಬಿಂಬ’ಕವನ ಸಂಕಲನವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಕುಟುಂಬದಲ್ಲಿ ಹೆಣ್ಣಿನ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಕುಟುಂಬದ ಸುಖ-ದುಃಖ, ಸವಾಲುಗಳನ್ನು ಸಮತೋಲನದಿಂದ ನಿಭಾಯಿಸಿ ಸಮಾಜದ ಏಳಿಗೆಗೆ ದಾರಿ ತೋರಿಸುವ ಸಂದೇಶಗಳು ಈ ಕವನ ಸಂಕಲನದಲ್ಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಮಾತನಾಡಿ, ಮೃದು ಭಾವಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರದ ದಾರಿ ತೋರಿಸುವ ಸೃಜನಶೀಲ ಕೃತಿಯಿದು. ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಭಾರತೀಯ ಕುಟುಂಬ ವ್ಯವಸ್ಥೆಯ ಮೌಲ್ಯಗಳನ್ನು ಈ ಕೃತಿ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ ಎಂದರು.
ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಕೃತಿ ಪರಿಚಯ ನೀಡಿ, ಕುಟುಂಬದೊಳಗಿನ ಪ್ರೀತಿ, ಸಾಂತ್ವನ, ಸಂತಸ, ನೋವು ಹಾಗೂ ಸಂಬಂಧಗಳ ಸೂಕ್ಷ್ಮ ಭಾವಗಳನ್ನು ಕವಯತ್ರಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕಿ ವಿಜಯಲಕ್ಷ್ಮೀ ಪಿ. ರೈ, ಅಜಿತ್ ಹೆಗ್ಡೆ ಕೆಂಜೂರುಗುತ್ತು ಹಾಗೂ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮಾತನಾಡಿದರು. ಪ್ರಸಾದ್ ರೈ ಕಳ್ಳಿಮಾರ್ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad



