ಮಂಗಳೂರು: ಕರಾವಳಿ ಕರ್ನಾಟಕದ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಶೀಘ್ರದಲ್ಲೇ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ನೂತನ ಕಟ್ಟಡ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಕರಾವಳಿ ಭಾಗದ ಮೂರು ಜಿಲ್ಲೆಗಳ ಯುವಕರನ್ನು ಕೇಂದ್ರೀಕರಿಸಿ ಉದ್ಯೋಗ ಮೇಳ ನಡೆಸಲಾಗುವುದು. ರಾಜ್ಯದ ವಿವಿಧೆಡೆ ನಡೆದ ಉದ್ಯೋಗ ಮೇಳಗಳಿಂದ ಇದುವರೆಗೆ 30 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರೆತಿದೆ ಎಂದರು.

8 ಹೊಸ ತರಬೇತಿ ಕೇಂದ್ರಗಳಿಗೆ ಅನುಮೋದನೆ: ರಾಜ್ಯದಲ್ಲಿ ಕೌಶಲ್ಯಭರಿತ ಯುವಕರನ್ನು ರೂಪಿಸುವ ನಿಟ್ಟಿನಲ್ಲಿ 8 ಹೊಸ ಕೆಜಿಟಿಟಿಐ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ರೆಫ್ರಿಜರೇಷನ್ ಹಾಗೂ ಎಸಿ ತಾಂತ್ರಿಕ ತರಬೇತಿ ಕೋರ್ಸ್ಗಳನ್ನು ಆರಂಭಿಸಲಾಗುತ್ತಿದೆ. ಪ್ರಸ್ತುತ ಒಂದು ದೀರ್ಘಾವಧಿ ಹಾಗೂ 31 ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಜಿಟಿಟಿಸಿಯಲ್ಲಿ ಪ್ರವೇಶಾತಿ ಹೆಚ್ಚಳ: ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಾದ ಜಿಟಿಟಿಸಿಗಳ ಪ್ರವೇಶಾತಿಯನ್ನು 2500 ರಿಂದ 6000ಕ್ಕೆ ಏರಿಸಲಾಗಿದೆ. ಜಿಟಿಟಿಸಿ ಶಿಕ್ಷಣಕ್ಕೆ ಶೇ.100 ಉದ್ಯೋಗಾವಕಾಶ ಇದೆ. ಮುಂದಿನ ದಿನಗಳಲ್ಲಿ ವಾರ್ಷಿಕ 10 ಸಾವಿರ ಮಂದಿಗೆ ಪ್ರವೇಶ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಡಾ. ಮಂಜುನಾಥ್ ಭಂಡಾರಿ ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉದ್ಯೋಗ ತರಬೇತಿ ಇಲಾಖೆ ಆಯುಕ್ತೆ ಶಿಲ್ಪಾ, ಮಾಜಿ ಕಾರ್ಪೊರೇಟರ್ ಶಕೀಲಾ ಕಾವಾ, ಕೆಜಿಟಿಟಿಐ ಜಂಟಿ ಕಾರ್ಯದರ್ಶಿ ವಿ.ಎಸ್. ರಘುಪತಿ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad
