ಮಂಗಳೂರು: ಇಲ್ಲಿನ ನಗರದ ತಣ್ಣೀರುಭಾವಿ ಬ್ಲೂ ಬೇ ಇಕೋ ಬೀಚ್ನಲ್ಲಿ ಶುಕ್ರವಾರ ಆರಂಭವಾದ 7 ನೇ ಆವೃತ್ತಿಯ ಎನ್ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಅದ್ದೂರಿ ಚಾಲನೆ ಸಿಕ್ಕಿದೆ.
ರಾಷ್ಟ್ರೀಯ ಚಾಂಪಿಯನ್ ಷಿಪ್ ಸರಣಿ ಪ್ರಮುಖ ಹಂತ ಆಗಿರುವ ಈ ಟೂರ್ನಿ, ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿಯೂ ಮಹತ್ವ ಪಡೆದಿದ್ದು, ಉತ್ತಮ ಹವಾಮಾನ ಹಾಗೂ ಅಬ್ಬರದ ಅಲೆಗಳ ನಡುವೆ ಸ್ಪರ್ಧೆಗಳು ಆರಂಭಗೊಂಡವು.
ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ದಿಲೀಪ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ರಾಮಮೋಹನ್ ಪರಾಂಜಪೆ, ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ದೀಕ್ಷಿತ್ ಸುವರ್ಣ, ಕಾರ್ಯದರ್ಶಿ ಶಮಂತ್ ಕುಮಾರ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಅಧ್ಯಕ್ಷ ಧನಂಜಯ ಶೆಟ್ಟಿ ಹಾಗೂ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಅಥ್ಲೀಟ್ ರಿಲೇಷನ್ಸ್ ಮ್ಯಾನೇಜರ್ ಸೌರಭ್ ವರ್ಮಾ ಸೇರಿದಂತೆ ಹಲವರು ಇದ್ದರು.

ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶಮಂತ್ ಕುಮಾರ್ ಮಾತನಾಡಿ, ಸರ್ಫರ್ಗಳು ಹಾಗೂ ಸ್ಥಳೀಯ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಉತ್ತಮ ಅಲೆಗಳ ಪರಿಸ್ಥಿತಿ ದೊರೆತಿದ್ದು, ಚಾಂಪಿಯನ್ಶಿಪ್ಗೆ ಭರ್ಜರಿ ಆರಂಭ ಸಿಕ್ಕಿದೆ ಎಂದರು.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಸೌರಭ್ ವರ್ಮಾ, ಭಾರತದಲ್ಲಿ ಸರ್ಫಿಂಗ್ ಕ್ರೀಡೆ ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಇಂತಹ ಸ್ಪರ್ಧೆಗಳು ಕ್ರೀಡಾಪಟುಗಳಿಗೆ ಉತ್ತಮ ಅನುಭವ ಒದಗಿಸುತ್ತವೆ,” ಎಂದು ಹೇಳಿದರು.
ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ಮಂತ್ರ ಸರ್ಫ್ ಕ್ಲಬ್ ಹಾಗೂ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಈ ಸ್ಪರ್ಧೆಯನ್ನು ಆಯೋಜಿಸಿವೆ. ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಹಕಾರ ನೀಡಿವೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (ಎನ್ಎಂಪಿಎ) ಪ್ರಾಯೋಜಕತ್ವದಲ್ಲಿ ಸ್ಪರ್ಧೆ ನಡೆಯುತ್ತಿದೆ.
What do you feel about this post?
Like
Love
Happy
Haha
Sad
