ತಲಪಾಡಿ: ಶಾರದಾ ವಿದ್ಯಾನಿಕೇತನ ಪಿ.ಯು. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ಆಯೋಜಿಸಿದ್ದ ಮಾರ್ಗದರ್ಶನ ಕಾರ್ಯಕ್ರಮ ಕಾಲೇಜಿನ ಭೂ ವರಾಹ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾರದಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದೊಂದಿಗೆ ಅಧ್ಯಯನ ನಡೆಸಬೇಕು. ಸಂಸ್ಥೆ ಒದಗಿಸುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ನಿರ್ದೇಶಕ ಸಮೀರ್ ಪುರಾಣಿಕ್ ಅವರು ಮಾತನಾಡಿ, ಪೋಷಕರು ಮಕ್ಕಳಿಗೆ ನಿರಂತರ ಪ್ರೋತ್ಸಾಹ ಹಾಗೂ ಮಾನಸಿಕ ಬೆಂಬಲ ನೀಡುವುದು ಅಗತ್ಯ ಎಂದು ಹೇಳಿದರು. ಶಿಕ್ಷಣಯಾತ್ರೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಗುರಿಯತ್ತ ಮುನ್ನಡೆಯಲು ನೆರವಾಗಬೇಕು ಎಂದರು.
ಪ್ರಾಂಶುಪಾಲ ವಿನಾಯಕ್ ಬಿ.ಜಿ. ಅವರು ಹೊಸ ಶೈಕ್ಷಣಿಕ ವರ್ಷದ ವ್ಯವಸ್ಥೆ, ಕಾಲೇಜಿನ ಕಾರ್ಯವಿಧಾನ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಪೋಷಕರ ಪಾತ್ರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲೆ ಸುಷ್ಮಾ ದಿನಕರ್, ಶಾರದಾ ವಿದ್ಯಾನಿಕೇತನ ಡೇ ಸ್ಕೂಲ್ನ ಪ್ರಾಂಶುಪಾಲ ಮೋಹನದಾಸ್, ಪ್ರವೇಶ ವ್ಯವಸ್ಥಾಪಕ ವಿವೇಕ್ ತಂತ್ರಿ, ಆಡಳಿತ ವ್ಯವಸ್ಥಾಪಕ ಪ್ರಫುಲ್ ಹಾಗೂ ಉಪ ಪ್ರಾಂಶುಪಾಲ ಸುರೇಶ್ ಭಟ್ ಇದ್ದರು.
ಭೌತಶಾಸ್ತ್ರ ವಿಭಾಗದ ಅಕ್ಷತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಸಾಯನಶಾಸ್ತ್ರ ವಿಭಾಗದ ಸೌಮ್ಯಾ ನಿರೂಪಿಸಿದರು. ಇಂಗ್ಲಿಷ್ ವಿಭಾಗದ ಅಶೋಕ್ ವಂದನಾರ್ಪಣೆ ಸಲ್ಲಿಸಿದರು.
What do you feel about this post?
Like
Love
Happy
Haha
Sad
