ಬೆಂಗಳೂರು: “ನಾನು ಹುಟ್ಟುವಾಗ ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ. ಎರಡು ಹೊತ್ತು ಊಟಕ್ಕೂ ಹಣ ಇರುತ್ತಿರಲಿಲ್ಲ. ಪಂಚಾಯಿತಿ ಸದಸ್ಯರೂ ಇಲ್ಲದ ಸಾಮಾನ್ಯ ಕುಟುಂಬದಿಂದ ಬಂದವನು ನಾನು…” ಎಂದು ವಿಧಾನಸಭೆಯಲ್ಲಿ ಉಪಸಭಾಪತಿ ಮಂಕಾಳ್ ವೈದ್ಯ ಅವರು ತಮ್ಮ ಬದುಕಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು.
ಭಟ್ಕಳದ ಸಾಮಾನ್ಯ ಕುಟುಂಬದಿಂದ ಬಂದು ವಿಧಾನಸಭೆಯ ಉಪಸಭಾಪತಿ ಸ್ಥಾನ ಅಲಂಕರಿಸಿರುವ ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಪಯಣವನ್ನು ಅವರು ಸದನದಲ್ಲಿ ಮೆಲುಕು ಹಾಕಿದರು.
ತಮ್ಮ ಬದುಕಿನಲ್ಲಿ ಹೊಟೇಲ್ ಹಾಗೂ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿದ್ದ ದಿನಗಳನ್ನೂ ನೆನಪಿಸಿಕೊಂಡ ಮಂಕಾಳ್ ವೈದ್ಯ, ಕಷ್ಟದ ನಡುವೆಯೇ ಜೀವನ ಸಾಗಿಸಿ ರಾಜಕೀಯ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದರು.
ರಾಜಕೀಯದಿಂದ ದೂರವೇ ಇದ್ದ ತಮಗೆ ತಮ್ಮ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಜತೆ ಉಂಟಾದ ಭಿನ್ನಾಭಿಪ್ರಾಯವೇ ಚುನಾವಣಾ ರಾಜಕೀಯ ಪ್ರವೇಶಕ್ಕೆ ಕಾರಣವಾಯಿತು ಎಂದರು.
ಮೊದಲ ಬಾರಿಗೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದಾಗ ದೊಡ್ಡ ರಾಜಕೀಯ ಪಕ್ಷಗಳು ತಮ್ಮ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇಡಗುಂಜಿ ಮಹಾಗಣಪತಿಯ ಆಶೀರ್ವಾದ ಪಡೆದು ಚುನಾವಣಾ ಕಣಕ್ಕಿಳಿದ ತಮಗೆ ಜನರ ಆಶೀರ್ವಾದ ದೊರೆತು ಜಿಲ್ಲಾ ಪಂಚಾಯಿತಿ ಸದಸ್ಯನಾದೆ. ಅಲ್ಲಿಂದ ತಮ್ಮ ರಾಜಕೀಯ ಪಯಣ ವೇಗ ಪಡೆದುಕೊಂಡಿತು ಎಂದು ವಿವರಿಸಿದರು.
ಕಾಂಗ್ರೆಸ್ ಟಿಕೆಟ್ ಸಿಗದಿದ್ದರೂ ಗೆಲುವು
2013ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿಲ್ಲ. ಆಗಲೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದೆ. ತಮ್ಮ ಕ್ಷೇತ್ರದ ಜನರನ್ನು ದೇವರೆಂದು ಭಾವಿಸಿರುವುದಾಗಿ ಹೇಳಿದ ಅವರು, ದುಡಿಮೆಯಿಂದ ಗಳಿಸಿದ ಹಣದಲ್ಲೂ ಜನರಿಗಾಗಿ ಸೇವೆ ಮಾಡಿರುವುದಾಗಿ ಮಂಕಾಳ ವೈದ್ಯ ಅವರು ಸ್ಮರಿಸಿದರು.
ಸಾಮಾನ್ಯ ಕುಟುಂಬದಿಂದ ಬಂದ ತಾವು ಹಲವು ಕಷ್ಟಗಳನ್ನು ಎದುರಿಸಿ ರಾಜಕೀಯವಾಗಿ ಬೆಳೆದು ಇಂದು ವಿಧಾನಸಭೆಯ ಉಪಸಭಾಪತಿ ಸ್ಥಾನಕ್ಕೆ ಬಂದಿರುವುದನ್ನು ನೆನಪಿಸಿಕೊಂಡ ಅವರು, ತಮಗೆ ದೊರೆತಿರುವ ಈ ಜವಾಬ್ದಾರಿಯನ್ನು ಜನಪರವಾಗಿ ನಿಭಾಯಿಸುವುದಾಗಿ ಭಾವುಕರಾಗಿ ಹೇಳಿದರು.
“ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಜನಪರವಾಗಿ ನಿಭಾಯಿಸುತ್ತೇನೆ” ಎಂದು ಮಂಕಾಳ್ ವೈದ್ಯ ಹೇಳಿದರು.
What do you feel about this post?
Like
Love
Happy
Haha
Sad





