ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ವತಿಯಿಂದ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ರಾಷ್ಟ್ರ ಮಟ್ಟದ ಚೆಸ್ ಚಾಂಪಿಯನ್ ಷಿಪ್- ಅ. 2 ರಿಂದ 8 ರವರೆಗೆ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 600 ಕ್ಕೂ ಹೆಚ್ಚು ಮಂದಿ ಆಟಗಾರರು, ತರಬೇತುದಾರರು ಮತ್ತು ಪೋಷಕರು ಭಾಗವಹಿಸುವ ನಿರೀಕ್ಷೆ ಇದ್ದು, ರಾಷ್ಟ್ರ ಮಟ್ಟದ ಚೆಸ್ ಟೂರ್ನಿಯಲ್ಲಿ ಕರಾವಳಿ ಭಾಗದ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕೂ ಆದ್ಯತೆ ಸಿಗಲಿದೆ ಎಂದರು.
ರಾಷ್ಟ್ರೀಯ ಮಾನ್ಯತೆ ಪಡೆದಿರುವ ಚೆಸ್ ಚಾಂಪಿಯನ್ ಷಿಪ್ನಲ್ಲಿ ವಿಜೇತರಿಗೆ ರಾಷ್ಟ್ರ ಹಾಗೂ ಅಂತರ ರಾಷ್ಟ್ರ ಮಟ್ಟದ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶದ ಜತೆಗೆ ಕಾಮನ್ವೆಲ್ತ್ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ. ಚೆಸ್ ಟೂರ್ನಿಯಲ್ಲಿ ಒಟ್ಟು 8 ಲಕ್ಷ ರೂಪಾಯಿ ಬಹುಮಾನ ಹಾಗೂ 2 ಲಕ್ಷ ಶಿಷ್ಯವೇತನ ನೀಡಲಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಚೆಸ್ ಪ್ರತಿಭೆಗಳಿಗೆ ಕೊರತೆಯಿಲ್ಲ. ಅಂತರ ರಾಷ್ಟ್ರ ಮಟ್ಟದ ಮಾಸ್ಟರ್ಗಳಾದ ಶರಣ್ ರಾವ್, ವಿಯಾನ್ ಡಿಕ್ಹುನಾ ಹಾಗೂ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಐಶಾನಿ ಶರ್ಮಾ ಜಿಲ್ಲೆಯ ಹೆಮ್ಮೆ ತಂದಿದ್ದಾರೆ. ಉದ್ಘಾಟನೆಯ ದಿನದಂದು ಟೂರ್ನಿ ಮಧ್ಯಾಹ್ನ ನಡೆಯಲಿದ್ದು, ನಂತರ ಪ್ರತಿದಿನ ಬೆಳಿಗ್ಗೆಯಿಂದ ಟೂರ್ನಿ ನಡೆಯಲಿದೆ. ಚೆಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವವರಿಗೆ ಶುಲ್ಕ ನಿಗದಿ ಮಾಡಲಾಗಿದ್ದು, 120 ಆಟಗಾರರಿಗೆ ಉಚಿತ ವಸತಿ ಸೌಲಭ್ಯ ಇದ್ದು, ಪ್ರತಿದಿನ ಅವರಿಗೆ 1200 ಗೌರವಧನ ನೀಡಲಾಗುತ್ತದೆ ಎಂದರು.
ಚೆಸ್ ಟೂರ್ನಿ ಒಟ್ಟು ಎಂಟು ಸುತ್ತುಗಳಲ್ಲಿ ನಡೆಲಿದ್ದು, ಜುಲೈ ತಿಂಗಳಿನಲ್ಲಿ ನೋಂದಣಿಗೆ ಕೊನೆಯ ದಿನ ಆಗಿದ್ದು, ಈಗಾಗಲೇ 300 ಮಂದಿ ನೋಂದಣಿ ಮಾಡಿಕೊಂಡಿದ್ದು, ಇನ್ನು ಸಾಕಷ್ಟು ಮಂದಿ ಆಟಗಾರರು ನೋಂದಣಿ ಮಾಡಿಕೊಳ್ಳಲಿದ್ದಾರೆ. ಮಂಗಳೂರಿನಲ್ಲಿ ಇಂತಹ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿ ಆಗಿದ್ದು, ಇದಕ್ಕೆ ಬೇಕಾಗುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಕಾರ್ಯಕ್ರಮದ ಅತಿಥಿಗಳ ಬಗ್ಗೆ ಮುಂದೆ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಸುನಿಲ್ ಆಚಾರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ಉಪಾಧ್ಯಕ್ಷೆ ಡಾ. ವಾಣಿ ಎಸ್. ಪಣಿಕರ್ ಹಾಗೂ ಖಜಾಂಚಿ ಕ್ರತಿನ್ ಕುಮಾರ್ ಇದ್ದರು.
What do you feel about this post?
Like
Love
Happy
Haha
Sad



