ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅಡಿ ಗುರುಪುರ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸುಲ್ತಾನ್ ಬತ್ತೇರಿ–ತಣ್ಣೀರುಬಾವಿ ಸಂಪರ್ಕ ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಸೇತುವೆ ನಿರ್ಮಾಣದ ಬಳಿಕ ಮಂಗಳೂರಿನ ಜನರಿಗೆ ತಣ್ಣೀರುಬಾವಿ ಕಡಲತೀರಕ್ಕೆ ತ್ವರಿತ ಸಂಪರ್ಕ ಕಲ್ಪಿಸುವ ಜತೆಗೆ, ತಣ್ಣೀರುಬಾವಿ–ಬೆಂಗ್ರೆ ನಿವಾಸಿಗಳ ಮಂಗಳೂರು ನಗರಕ್ಕೆ ಸಂಚರಿಸುವ ಪ್ರಯಾಣ ಸನಿಹ ಆಗಲಿದೆ.
ಬೋ ಸ್ಟ್ರಿಂಗ್ ವಿನ್ಯಾಸದ ಸೇತುವೆ ನಡುವೆ ಯಾವುದೇ ಆಧಾರ ಸ್ತಂಭಗಳಿಲ್ಲದೆ 100 ಮೀಟರ್ ಉದ್ದದ ಏಕವಿಸ್ತಾರದ ವಿನ್ಯಾಸ ನಿರ್ಮಾಣ ಮಾಡಲಾಗಿದೆ. ಇಂತಹ ವಿನ್ಯಾಸದಿಂದಲಾಗಿಯೇ ಬೋ ಸ್ಟ್ರಿಂಗ್ ಸೇತುವೆ ದೇಶದ ಅತ್ಯಂತ ಉದ್ದದ ಏಕವಿಸ್ತಾರದ ಸೇತುವೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಒಂದಾಗಿದೆ.
ಹಲವು ವರ್ಷಗಳಿಂದ ನಿರೀಕ್ಷೆಯ ಸುಲ್ತಾನ್ ಬತ್ತೇರಿ–ತಣ್ಣೀರುಬಾವಿ ಸಂಪರ್ಕ ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಹೈಟೆಕ್ ಮಾದರಿಯ ಭವ್ಯ ಬೋ ಸ್ಟ್ರಿಂಗ್ ವಿನ್ಯಾಸದ ಸೇತುವೆ ನಿರ್ಮಾಣ ಹಂತದಲ್ಲಿಯೇ ಜನರ ಆಕರ್ಷಣೆ ಆಗಿದೆ. ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾದರೆ ಬೆಂಗ್ರೆ, ತಣ್ಣೀರುಬಾವಿ ಹಾಗೂ ಮಂಗಳೂರು ನಡುವಿನ ಸಂಚಾರ ಇನ್ನಷ್ಟು ಹತ್ತಿರಸುಗಮವಾಗಿ ಸಾಗಲಿದ್ದು, ಸಾವಿರಾರು ಜನರ ದಶಕಗಳ ಕನಸು ನನಸಾಗಲಿದೆ.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಫಲ್ಗುಣಿ ನದಿಗೆ ಅಡ್ಡಲಾಗಿ 64 ಕೋಟಿ ವೆಚ್ಚದಲ್ಲಿ ಈ ಅತ್ಯಾಧುನಿಕ ಹೈಟೆಕ್ ಮಾದರಿಯ ಬೋಸ್ಟ್ರಿಂಗ್ ಮಾದರಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಅಂದುಕೊಂಡಂತೆ ಯೋಜನೆ ನಡೆದರೆ ಸೆಪ್ಟೆಂಬರ್ ಅಂತ್ಯದೊಳಗೆ ಸೇತುವೆ ಸಂಚಾರಕ್ಕೆ ಮುಕ್ತ ಆಗುವ ನಿರೀಕ್ಷೆ ಇದೆ.

ತಣ್ಣೀರುಬಾವಿ ಹಾಗೂ ಬೆಂಗ್ರೆ ಭಾಗದ ನಿವಾಸಿಗಳು ಈ ಮೊದಲು ಸಂಪರ್ಕ ಸಾಧಿಸಿಲು ಪರದಾಡಬೇಕಾದ ಸ್ಥಿತಿ ಇತ್ತು. ಫೆರ್ರಿ ಮೂಲಕ ಮಂಗಳೂರು ತಲಬೇಕು. ಇಲ್ಲವೇ ಕೂಳೂರು ಮಾರ್ಗವಾಗಿ 30 ರಿಂದ 35 ನಿಮಿಷ ಪ್ರಯಾಣ ಮಾಡಿ ತಲುಪಬೇಕಾದ ಸ್ಥಿತಿ ಇತ್ತು. ಆದರೆ, ಈಗ ಸೇತುವೆ ನಿರ್ಮಾಣದ ನಂತರ 10 ನಿಮಿಷದಲ್ಲಿ ಮಂಗಳೂರು ತಲುಪುವ ಶುಭ ಗಳಿಗೆ ಕೂಡಿ ಬಂದಿದೆ. 4,000 ಕ್ಕೂ ಹೆಚ್ಚು ಕುಟುಂಬಕ್ಕೆ ಈ ಸೇತುವೆ ಸಂಪರ್ಕ ಕೊಂಡಿ ಆಗಿದೆ.
ರಾಜ್ಯದ ಮೊದಲ ಬೋಸ್ಟ್ರಿಂಗ್ ಮಾದರಿ ವಾಹನ ಸಂಚಾರ ಸೇತುವೆ ಎಂಬ ಹೆಗ್ಗಳಿಕೆ ಈ ಸೇತುವೆಗೆ ಇದೆ. 285 ಮೀಟರ್ ಉದ್ದದಲ್ಲಿ ಹೈಟೆಕ್ ಮಾದರಿ ಸೇತುವೆ ನಿರ್ಮಾಣ ಮಾಡಲಾಗಿದೆ. 100 ಮೀಟರ್ ನ್ಯಾವಿಗೇಷನ್ ಸ್ಪಾನ್ ಹಾಗೂ 10 ಮೀಟರ್ ವರ್ಟಿಕಲ್ ಕ್ಲಿಯರೆನ್ಸ್ ಸೌಲಭ್ಯ ಇರುವಂತಹ ತಂತ್ರಜ್ಞಾನದ ವಿನ್ಯಾಸ ಮಾಡಲಾಗಿದೆ. ರಾಷ್ಟ್ರೀಯ ಜಲಮಾರ್ಗ–43 ರ ನಿಯಮಾವಳಿಗೆ ಅನುಗುಣವಾಗಿ ಹೈಟೈಡ್ ಲೈನ್ನಿಂದ 10 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಸೇತುವೆ ಈಗ ಎಲ್ಲರ ಆಕರ್ಷಣೆ ಆಗಿದೆ.
ಮಳೆ, ಗಾಳಿ, ಪ್ರವಾಹದ ನಡುವೆ ದೋಣಿ ಅವಲಂಬಿಸಿ ಸಂಚರಿಸಬೇಕಾದ ತಣ್ಣೀರುಬಾವಿ ಮತ್ತು ಬೆಂಗ್ರೆ ನಿವಾಸಿಗಳ ಬಹುಕಾಲದ ಸಂಕಷ್ಟಕ್ಕೆ ಈ ಸೇತುವೆ ಸಂಪರ್ಕದ ಕೊಂಡಿ ಆಗಿದೆ. ಈ ಭಾಗದ ಜನರು ಬಹಳ ವರ್ಷಗಳಿಂದ ಪಟ್ಟ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ಸಿಗುವ ದಿನಗಳು ದೂರವಿಲ್ಲ.
ಈ ಭಾಗದ ಜನರ ಸಮಸ್ಯೆಗೆ ಸ್ಪಂದನೆ
ಈ ಭಾಗದ ಜನರು ಮಂಗಳೂರು ನಗರಕ್ಕೆ ನಿತ್ಯವೂ ಹೋಗಬೇಕಾದ ಸ್ಥಿತಿ ಇದೆ. ಸೇತುವೆ ನಿರ್ಮಾಣ ಆಗದೇ ಇದ್ದರೆ ತುಂಬಾ ಕಷ್ಟ ಪಡಬೇಕಾಗಿತ್ತು. ಆದರೆ ಈಗ ಸೇತುವೆ ನಿರ್ಮಾಣದಿಂದ ಸುತ್ತು ಹಾಕಿ ನಗರ ಸೇರಬೇಕಿದ್ದ ಇಲ್ಲಿನ ಜನರಿಗೆ ಮಂಗಳೂರು ಮತ್ತಷ್ಟು ಹತ್ತಿರವಾಗಿದೆ. ಈಗ ಎಷ್ಟು ಸಾರಿ ಬೇಕಾದರೂ ಬಂದು ಹೋಗಿ ಮಾಡಬಹುದು. ಅತ್ಯಾಧುನಿಕ ಶೈಲಿಯಲ್ಲಿ ಸೇತುವೆ ನಿರ್ಮಾಣ ಆಗಿದೆ. ಈ ಭಾಗದ ಜನರ ಗೋಳು, ಸಂಕಷ್ಟಕ್ಕೆ ಸ್ಪಂದನೆ ಸಿಕ್ಕಿದೆ ಎಂದು ಸ್ಥಳೀಯರು ತಿಳಿಸಿದರು.
ಹಲವು ವರ್ಷಗಳ ಹಗ್ಗಜಗ್ಗಾಟದಿಂದ ಸ್ಥಗಿತಗೊಂಡಿದ್ದ ಸೇತುವೆ
2010 ರ ಅಗಸ್ಟ್ 23 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು, ಅನುದಾನದ ಕೊರತೆಯಿಂದ ಕಾಮಗಾರಿ ಹಲವು ವರ್ಷಗಳ ಹಗ್ಗಜಗ್ಗಾಟದಿಂದ ಸ್ಥಗಿತಗೊಂಡಿತ್ತು. ನಂತರ ವಿವಿಧ ಹಂತಗಳಲ್ಲಿ ಯೋಜನೆಗೆ ಮರುಜೀವ ಸಿಕ್ಕಿದ್ದು, ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಂತಿಮ ರೂಪ ಪಡೆದುಕೊಂಡಿದೆ.
What do you feel about this post?
Like
Love
Happy
Haha
Sad



