ಮಂಗಳೂರು: ತೃತೀಯ ಲಿಂಗೀಯರ ಬದುಕಿನ ವಾಸ್ತವತೆ, ಅವರು ಸಮಾಜದಲ್ಲಿ ಎದುರಿಸುವ ತಾರತಮ್ಯ ಹಾಗೂ ಸಮಾನ ಹಕ್ಕುಗಳ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಲಾಲ್ಬಾಗ್ ಆವರಣದಲ್ಲಿ ಪ್ರದರ್ಶಿಸಲಾದ ಬೀದಿ ನಾಟಕ ಸಾರ್ವಜನಿಕರ ಗಮನ ಸೆಳೆಯಿತು.
ಡಾ. ಪಿ. ದಯಾನಂದ ಪೈ–ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದ ಪಠ್ಯೇತರ ಚಟುವಟಿಕೆಯ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಾಟಕದಲ್ಲಿ ತೃತೀಯ ಲಿಂಗೀಯರು ಬಾಲ್ಯದಿಂದಲೇ ಅನುಭವಿಸುವ ಅವಮಾನ, ನಿರ್ಲಕ್ಷ್ಯ, ಕುಟುಂಬದಿಂದ ದೂರವಾಗುವ ಪರಿಸ್ಥಿತಿ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಎದುರಿಸುವ ಸವಾಲುಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಯಿತು. ಸಮಾಜದಲ್ಲಿ ಸಮಾನತೆ ಮತ್ತು ಗೌರವಯುತ ಬದುಕಿನ ಅಗತ್ಯತೆಯನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರು.

ಪರಿವರ್ತನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸಂಜನಾ ಛಲವಾದಿ ಮಾತನಾಡಿ, ತೃತೀಯ ಲಿಂಗೀಯರನ್ನು ಕೇವಲ ಕರುಣೆಯ ದೃಷ್ಟಿಯಿಂದ ನೋಡುವ ಬದಲು ಸಮಾಜದ ಸಮಾನ ಸದಸ್ಯರಾಗಿ ಸ್ವೀಕರಿಸಬೇಕು. ಈ ನಾಟಕ ನಮ್ಮ ಬದುಕಿನ ನೈಜ ಚಿತ್ರಣವನ್ನು ಜನರ ಮುಂದೆ ತಂದಿಟ್ಟಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಜನರಲ್ಲಿ ಅರಿವು ಮೂಡಿಸಿ, ನಮ್ಮನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿವರ್ತನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸಂಜನಾ ಚಲವಾದಿ, ಪಾಲಿಕೆ ಸಿಟಿ ಮಿಷನ್ ಮ್ಯಾನೇಜರ್ ಚಿತ್ತರಂಜನ್ ದಾಸ್, ಉಪನ್ಯಾಸಕರಾದ ಡಾ. ನಿತಿನ್ ಚೋಲ್ವೆಕಾರ್, ಅರುಣ ಕುಮಾರಿ, ಗಣೇಶ್, ಅಕ್ಷತಾ, ಪುಷ್ಪಾ ಎಚ್ ವಿದ್ಯಾರ್ಥಿಗಳಾದ ಅವಿನಾಶ್, ಮಂದಿರ, ದೀಕ್ಷಾ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad
