ಮಂಗಳೂರು: ಮೂತ್ರಶಾಸ್ತ್ರ ಕ್ಷೇತ್ರದ ಇತ್ತೀಚಿನ ಸಂಶೋಧನೆ, ಹೊಸ ತಂತ್ರಜ್ಞಾನ ಹಾಗೂ ವೈದ್ಯಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದಕ್ಷಿಣ ಭಾರತದ ಪ್ರತಿಷ್ಠಿತ ‘ಅಸೋಸಿಯೇಷನ್ ಆಫ್ ಸದರ್ನ್ ಯುರಾಲಜಿಸ್ಟ್ಸ್ 37ನೇ ವಾರ್ಷಿಕ ಸಮ್ಮೇಳನ ಇದೇ ಅ. 7 ರಿಂದ 9 ರವರೆಗೆ ಮಂಗಳೂರಿನ ಮೇರಿ ಹಿಲ್ನಲ್ಲಿ ಇರುವ ಪಾಲೇಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಸಮ್ಮೇಳನಾ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಂಗಳೂರಿನ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ಹಾಗೂ ಮಂಗಳೂರು ಯುರಾಲಜಿ ಫೋರಂ ಆಶ್ರಯದಲ್ಲಿ ಆಯೋಜಿಸಿರುವ ಈ ಮೂರು ದಿನಗಳ ವೈಜ್ಞಾನಿಕ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ 1500 ಕ್ಕೂ ಹೆಚ್ಚು ಯುರಾಲಜಿಸ್ಟ್ಗಳು, ವೈದ್ಯಕೀಯ ತಜ್ಞರು, ಸ್ನಾತಕೋತ್ತರ ತರಬೇತುದಾರರು, ಸಂಶೋಧಕರು ಹಾಗೂ ವೈದ್ಯಕೀಯ ಉಪಕರಣಗಳ ತಯಾರಕರು ಮತ್ತು ಪೂರೈಕೆದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮ್ಮೇಳನದಲ್ಲಿ ಮೂತ್ರಶಾಸ್ತ್ರ ಕ್ಷೇತ್ರದ ಇತ್ತೀಚಿನ ಚಿಕಿತ್ಸಾ ವಿಧಾನಗಳು, ಶಸ್ತ್ರಚಿಕಿತ್ಸೆಯಲ್ಲಿನ ತಾಂತ್ರಿಕ ಪ್ರಗತಿ, ಸಂಶೋಧನಾ ಫಲಿತಾಂಶಗಳು ಹಾಗೂ ವೈದ್ಯಕೀಯ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನ ವಿವಿಧ ವೈಜ್ಞಾನಿಕ ಅಧಿವೇಶನಗಳು ನಡೆಯಲಿವೆ. ತಜ್ಞರ ನಡುವೆ ಜ್ಞಾನ ವಿನಿಮಯಕ್ಕೆ ಇದು ಮಹತ್ವದ ವೇದಿಕೆ ಆಗಲಿದೆ.
ಅಗಸ್ಟ್ 7 ರಂದು ಸಂಜೆ 5 ಗಂಟೆಗೆ ನಡೆವ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಂಗಳೂರಿನಲ್ಲಿ ಇಷ್ಟೊಂದು ಬೃಹತ್ ಮಟ್ಟದಲ್ಲಿ ಯುರಾಲಜಿ ಕ್ಷೇತ್ರದ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿರುವುದು ಇದೇ ಮೊದಲ ಬಾರಿ ಆಗಿದೆ. ನಗರದ ಸಾಂಸ್ಕೃತಿಕ ವೈಭವ, ಆತಿಥ್ಯ ಮತ್ತು ವೈವಿಧ್ಯಮಯ ಪಾಕ ಪದ್ಧತಿಯನ್ನು ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಪರಿಚಯಿಸುವ ಅವಕಾಶ ಈ ಸಮ್ಮೇಳನದ ಮೂಲಕ ಲಭಿಸಲಿದೆ ಎಂದರು.
ಸಮ್ಮೇಳನಾ ಸಂಘಟನಾ ಸಮಿತಿ ಖಜಾಂಚಿ ಡಾ. ಪ್ರೀತಮ್ ಶರ್ಮಾ ಅವರು ಮಾತನಾಡಿ, ಮಂಗಳೂರಿನಲ್ಲಿ ಇಂತಹ ವಿಶಿಷ್ಟ ಅಸೋಸಿಯೇಷನ್ ಆಫ್ ಸದರ್ನ್ ಯುರಾಲಜಿಸ್ಟ್ಸ್ 37 ನೇ ವಾರ್ಷಿಕ ಸಮ್ಮೇಳನ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಬರುವ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ ಎಂದರು.
ಸಮ್ಮೇಳನಾ ಸಂಘಟನಾ ಸಮಿತಿಯ ಕಾರ್ಯದರ್ಶಿ ಡಾ. ಬಿ.ಎಂ. ಝೀಶಾನ್ ಹಮೀದ್ ಅವರು ಮಾತನಾಡಿ, ಕರಾವಳಿ ಮಂಗಳೂರು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದ್ದು, ಸಾಕಷ್ಟು ಮೆಡಿಕಲ್ ಹಬ್ ಆಗಿದ್ದು, ಬೃಹತ್ ಮಟ್ಟದಲ್ಲಿ ಯುರಾಲಜಿ ಕ್ಷೇತ್ರದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜನೆ ಮಾಡಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ತಜ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವ ಖಜಾಂಚಿ ಡಾ. ನಿಶ್ಚಿತ್ ಡಿಸೋಜ, ಡಾ. ಸನ್ಮಾನ್ ಕೆ.ಎನ್, ಡಾ. ಸುಯೋಗ್ ಶೆಟ್ಟಿ, ಡಾ. ರೋಷನ್ ವಿ. ಶೆಟ್ಟಿ ಇದ್ದರು.
ಚಿಂತನ– ಮಂಥನ ವೇದಿಕೆ: ಡಾ. ಸುಯೋಗ್ ಶೆಟ್ಟಿ
ಮಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಮಂಗಳೂರಿನ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ಹಾಗೂ ಮಂಗಳೂರು ಯುರಾಲಜಿ ಫೋರಂ ಆಶ್ರಯದಲ್ಲಿ ನಡೆಯುತ್ತಿದ್ದು, ಮೂರು ದಿನಗಳ ಕಾರ್ಯಕ್ರಮದಲ್ಲಿ ಚಿಂತನ, ಮಂಥನ ನಡೆಯಲಿದ್ದು, ಚಿಕಿತ್ಸಾ ವಿಧಾನಗಳು, ಶಸ್ತ್ರಚಿಕಿತ್ಸೆಯಲ್ಲಿನ ತಾಂತ್ರಿಕ ಪ್ರಗತಿ, ಸಂಶೋಧನಾ ಫಲಿತಾಂಶಗಳು ಹಾಗೂ ವೈದ್ಯಕೀಯ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನ ವಿವಿಧ ವೈಜ್ಞಾನಿಕ ಅಧಿವೇಶನಗಳು ನಡೆಯಲಿವೆ. ತಜ್ಞರ ನಡುವೆ ಜ್ಞಾನ ವಿನಿಮಯಕ್ಕೆ ಇದು ಮಹತ್ವದ ವೇದಿಕೆ ಆಗಲಿದೆ ಎಂದು ಮಂಗಳೂರು ಯುರಾಲಜಿ ಫೋರಂ ಕಾರ್ಯದರ್ಶಿ ಡಾ. ಸುಯೋಗ್ ಶೆಟ್ಟಿ ತಿಳಿಸಿದರು.
What do you feel about this post?
Like
Love
Happy
Haha
Sad





