ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಿಲ್ಲಿಸಿದ್ದ ಎಕ್ಸ್ಯು–300 ಕಾರೊಂದು ಏಕಾಏಕಿ ಸ್ಫೋಟಗೊಂಡು ಭಾರಿ ಆತಂಕ ಸೃಷ್ಟಿಸಿದೆ. ಸ್ಫೋಟದ ತೀವ್ರತೆಗೆ ಕಾರಿನ ಬಿಡಿಭಾಗಗಳು ಹಲವು ದಿಕ್ಕುಗಳಿಗೆ ಚದುರಿದ್ದು, ಸುತ್ತಲಿನ ಮನೆಗಳಲ್ಲಿ ಕಂಪನ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಿಪ್ಪರಗಿ ವೈನ್ ಶಾಪ್ ಎದುರು ನಿಲ್ಲಿಸಿದ್ದ ಈ ಕಾರು, ಅಲ್ಲಿನ ಉದ್ಯಮಿ ಹಣಮಂತ ಅಥಣಿ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಸ್ಫೋಟದ ತೀವ್ರತೆಗೆ ಕಾರು ಸುಮಾರು 10 ಅಡಿಗೂ ಹೆಚ್ಚು ಎತ್ತರಕ್ಕೆ ಹಾರಿ ಬಿದ್ದಿದ್ದು, ಒಂದು ಟೈರ್ ಸುಮಾರು 1,000 ಅಡಿ ದೂರಕ್ಕೆ, ಬ್ಯಾಟರಿ ಸೇರಿದಂತೆ ಇತರೆ ಬಿಡಿಭಾಗಗಳು 2,000 ರಿಂದ 3,000 ಅಡಿ ದೂರದವರೆಗೆ ಚದುರಿಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪವಿಭಾಗಾಧಿಕಾರಿ ಸೈಯದ್ ರೋಷನ್ ಜಮೀರ್, ಇನ್ ಸ್ಪೆಕ್ಟರ್ ಮಲ್ಲಪ್ಪ ಮಡ್ಡಿ, ಪಿಎಸ್ ಐ ಗಂಗಾಧರ ಪೂಜಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದರ ಜತೆಗೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ನ್ಯಾಯ ವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಸೇನೆಯ ತಾಂತ್ರಿಕ ತಂಡಗಳು ಸ್ಥಳ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿವೆ.
ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಸ್ಫೋಟಕ ವಸ್ತುವಿನಿಂದ ಸಂಭವಿಸಿದುದೇ ಅಥವಾ ವಾಹನದಲ್ಲಿದ್ದ ಯಾವುದಾದರೂ ತಾಂತ್ರಿಕ ದೋಷದಿಂದ ಸಂಭವಿಸಿದುದೇ ಎಂಬುದನ್ನು ತನಿಖೆಯ ಬಳಿಕವೇ ಸ್ಪಷ್ಟಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
What do you feel about this post?
Like
Love
Happy
Haha
Sad







