ಮಂಗಳೂರು: ಮಿಥ್ಯ ಕನ್ನಡ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಈ ಗೌರವ ತಮ್ಮ ಕಲಾ ಬದುಕಿನ ಅತ್ಯಂತ ಸ್ಮರಣೀಯ ಕ್ಷಣ. ಪ್ರಶಸ್ತಿ ಸಿಗುವ ನಿರೀಕ್ಷೆಯೇ ಇರಲಿಲ್ಲ. ಎರಡು ದಶಕಗಳಿಗೂ ಅಧಿಕ ಕಲಾ ಪಯಣದ ಏಳುಬೀಳುಗಳ ನಡುವೆ ಈ ಗೌರವ ಹೊಸ ಉತ್ಸಾಹ ತುಂಬಿದೆ ಎಂದು ಮಂಗಳೂರು ಮೂಲದ ನಟಿ ರೂಪಶ್ರೀ ವರ್ಕಾಡಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಿಥ್ಯ ಚಿತ್ರದ ನಿರ್ದೇಶಕ ಸುಮಂತ್ ಭಟ್ ಹಾಗೂ ಇದೇ ಚಿತ್ರಕ್ಕಾಗಿ ಬಾಲನಟ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಪಡೆದ ಅತೀಶ್ ಅವರೊಂದಿಗೆ ಸಂತಸದ ವಿಚಾರ ಹಂಚಿಕೊಂಡ ಅವರು, ಎರಡೂವರೆ ದಶಕಗಳ ಕಲಾ ಜೀವನದಲ್ಲಿ ಕನ್ನಡ ಮತ್ತು ತುಳು ಭಾಷೆಗಳ 700 ಕ್ಕೂ ಹೆಚ್ಚು ನಾಟಕಗಳಲ್ಲಿ 4,000 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದೇನೆ. ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ಸಂಸಾರದ ಸರ್ಕಸ್ ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಪ್ರವೇಶಿಸಿದ್ದು, ಕ್ರಿಸ್ಟಿಫರ್ ನೀನಾಸಂ ಹಾಗೂ ವಿದ್ದು ಉಚ್ಚಿಲ್ ರಂಗಾಯಣ ಅವರಿಂದ ರಂಗ ತರಬೇತಿ ಪಡೆದಿರುವುದಾಗಿ ಹೇಳಿದರು.
ತುಳು, ಕನ್ನಡ, ಕೊಂಕಣಿ, ಬ್ಯಾರಿ ಹಾಗೂ ಅರೆಭಾಷೆ ಸೇರಿ 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರೂಪಶ್ರೀ, ಬಯಾರಿ ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಪಡೆದಿದ್ದು, ಜೀಟಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಟ್ರಿಪಲ್ ತಲಾಖ್ ರಾಜ್ಯ ಪ್ರಶಸ್ತಿ ಪಡೆದಿವೆ. ಈ ಹಿಂದೆ ರೆಡ್ ಎಫ್ಎಂ ತುಳು ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳೂ ಲಭಿಸಿವೆ ಎಂದರು.
ಬಾಲನಟ ಅತೀಶ್ ಮಾತನಾಡಿ, ಬಾಲನಟನಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಈ ಗೌರವ ಮುಂದಿನ ಕಲಾ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.
ನಿರ್ದೇಶಕ ಸುಮಂತ್ ಭಟ್ ಅವರು ಮಾತನಾಡಿ, ಸಾಫ್ಟ್ವೇರ್ ಕ್ಷೇತ್ರದಲ್ಲಿದ್ದಾಗ ರಕ್ಷಿತ್ ಶೆಟ್ಟಿ ಅವರೊಂದಿಗೆ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದೆ. ಬಳಿಕ ಅವರ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಬಂದೆ. ಮಿಥ್ಯ ಚಿತ್ರದ ಕಥೆ ಕೇಳಿದ ರಕ್ಷಿತ್ ಶೆಟ್ಟಿ, ವಾಣಿಜ್ಯ ಲಾಭದ ಬಗ್ಗೆ ಯೋಚಿಸದೆ ಉತ್ತಮ ಚಿತ್ರ ಮಾಡು ಎಂದು ಪ್ರೋತ್ಸಾಹಿಸಿ ನಿರ್ಮಾಣದ ಹೊಣೆ ಹೊತ್ತರು. ಈ ಚಿತ್ರಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸುತ್ತವೆ ಎಂಬ ಕಲ್ಪನೆಯೂ ಇರಲಿಲ್ಲ. ಇದು ಇಡೀ ಚಿತ್ರತಂಡದ ಪರಿಶ್ರಮಕ್ಕೆ ಸಂದ ಗೌರವ ಎಂದು ತಿಳಿಸಿದರು.
What do you feel about this post?
Like
Love
Happy
Haha
Sad





