ಮೈಸೂರು: ಭಾರತದ ಯುವಶಕ್ತಿಯೇ ದೇಶದ ಅತಿದೊಡ್ಡ ಸಾಮರ್ಥ್ಯವಾಗಿದ್ದು, ಯುವಕರ ಶಕ್ತಿ ಮತ್ತು ಪ್ರತಿಭೆಯ ಬಲದಿಂದಲೇ ಭಾರತ ಇಂದು ವಿಶ್ವದ ಅತ್ಯಂತ ಚುರುಕಾದ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೈಸೂರಿನ ರಾಮಕೃಷ್ಣ ಆಶ್ರಮದ ವತಿಯಿಂದ ನಿರ್ಮಿಸಲಾದ ವಿವೇಕ ಸ್ಮಾರಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, “ಸ್ವಾಮಿ ವಿವೇಕಾನಂದರು ಕಂಡಿದ್ದ ಶಕ್ತಿಶಾಲಿ ಭಾರತದ ಕನಸನ್ನು ಸಾಕಾರಗೊಳಿಸುವ ಹೊಣೆ ಇಂದಿನ ಯುವಜನರ ಮೇಲಿದೆ” ಎಂದು ಹೇಳಿದರು.
ಭಾಷಣದ ಆರಂಭದಲ್ಲೇ ಕನ್ನಡದಲ್ಲಿ “ಎಲ್ಲರಿಗೂ ನನ್ನ ನಮಸ್ಕಾರಗಳು” ಎಂದು ಶುಭಾಶಯ ಕೋರಿದ ಪ್ರಧಾನಿ, “ಮೊದಲಿಗೆ ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸುತ್ತೇನೆ” ಎಂದು ನುಡಿದರು.
ಸ್ವಾಮಿ ವಿವೇಕಾನಂದರು ಯುವಜನರ ಶಕ್ತಿಯನ್ನೇ ರಾಷ್ಟ್ರ ನಿರ್ಮಾಣದ ಪ್ರಮುಖ ಆಧಾರವೆಂದು ಪರಿಗಣಿಸಿದ್ದರು. ಶಿಕ್ಷಣ, ಕೌಶಲ್ಯ ಮತ್ತು ಶಿಸ್ತಿನ ಮೂಲಕ ಯುವಕರನ್ನು ಸಬಲಗೊಳಿಸಿದ ರಾಷ್ಟ್ರಗಳು ಅಭಿವೃದ್ಧಿಯತ್ತ ವೇಗವಾಗಿ ಸಾಗಿವೆ. ಅದೇ ಮಾದರಿಯಲ್ಲಿ ಭಾರತದ ಯುವಕರೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ದೇಶದ ಬಗ್ಗೆ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾರ್ಥವನ್ನು ತ್ಯಜಿಸಿ ರಾಷ್ಟ್ರಹಿತಕ್ಕಾಗಿ ಬದುಕುವ ಸಂಕಲ್ಪ ಯುವಜನರಲ್ಲಿ ಮೂಡಬೇಕು. ಭಾರತ ಮಾತೆಯ ಸೇವೆಯನ್ನೇ ಜೀವನದ ಪರಮ ಗುರಿಯನ್ನಾಗಿ ಸ್ವೀಕರಿಸಿದಾಗ ಮಾತ್ರ ಸ್ವಾಮಿ ವಿವೇಕಾನಂದರ ಆಶಯಗಳು ಸಂಪೂರ್ಣವಾಗಿ ಸಾಕಾರಗೊಳ್ಳಲಿವೆ ಎಂದು ಪ್ರಧಾನಿ ಮೋದಿ ಹೇಳಿದರು.
What do you feel about this post?
Like
Love
Happy
Haha
Sad





