ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ನ ಕೇಂದ್ರ ಗ್ರಂಥಾಲಯದ ವತಿಯಿಂದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ಅತ್ಯುತ್ತಮ ಗ್ರಂಥಾಲಯ ಬಳಕೆದಾರರ ಸನ್ಮಾನ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಕಾಲೇಜಿನ ನೆಲಮಹಡಿಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದು ಪರಿಗಣಿಸಲ್ಪಡುವ ಡಾ. ಎಸ್.ಆರ್. ರಂಗನಾಥನ್ ಅವರ ಜೀವನ ಹಾಗೂ ಕೊಡುಗೆಗಳನ್ನು ಸ್ಮರಿಸುವುದರೊಂದಿಗೆ ಆರಂಭವಾಯಿತು. ಗ್ರಂಥಾಲಯಗಳು ಕಲಿಕೆ, ಸಂಶೋಧನೆ ಮತ್ತು ಜ್ಞಾನ ವಿನಿಮಯದಲ್ಲಿ ವಹಿಸುವ ಮಹತ್ವದ ಪಾತ್ರದ ಕುರಿತು ಸಮಾಲೋಚನೆ ನಡೆಯಿತು.
ಸಹ್ಯಾದ್ರಿ ಕಾಲೇಜಿನ ಗ್ರಂಥಪಾಲಕಿ ಡಾ. ಭಾರತಿ ಕೆ. ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಕ್ಷಿಣ ಭಾರತದಲ್ಲಿನ ಸ್ಪ್ರಿಂಗರ್ ನೇಚರ್ನ ಪರವಾನಗಿ ವ್ಯವಸ್ಥಾಪಕ ರಜನೀಶ್ ಅಪ್ಪಯ್ಯ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಡ್ರಿಲ್ಬಿಟ್ ಕೃತಿಚೌರ್ಯ ತಡೆ ತಂತ್ರಾಂಶದ ಉತ್ಪನ್ನ ತರಬೇತಿ ಮತ್ತು ತಾಂತ್ರಿಕ ಬೆಂಬಲದ ಸಹಾಯಕ ವ್ಯವಸ್ಥಾಪಕ ಆಕಾಶ್ ಎಸ್. ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಸಹ್ಯಾದ್ರಿ ಆಡಳಿತಾಧಿಕಾರಿ ಹಾಗೂ ಟ್ರಸ್ಟಿ ಕೃಷ್ಣ ಹೆಗ್ಡೆ, ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ ಮತ್ತು ಉಪಪ್ರಾಂಶುಪಾಲ ಡಾ. ಸುಧೀರ್ ಶೆಟ್ಟಿ ಇದ್ದರು.
ಡಾ. ಎಸ್.ಆರ್. ರಂಗನಾಥನ್ ಅವರ ಜೀವನ ಮತ್ತು ಕೊಡುಗೆಗಳ ಕುರಿತು ವಿಡಿಯೊ ಪ್ರದರ್ಶನದ ಬಳಿಕ ದೀಪ ಬೆಳಗಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಶೈಕ್ಷಣಿಕ ಸಂಪನ್ಮೂಲಗಳ ಬಳಕೆ ಹಾಗೂ ಕೃತಿಚೌರ್ಯ ತಡೆ ಕುರಿತು ಮಾಹಿತಿ ನೀಡಿದರು.
ಮುದ್ರಿತ ಮತ್ತು ಡಿಜಿಟಲ್ ಮಾಹಿತಿ ಸಂಪನ್ಮೂಲಗಳ ವಿಭಾಗಗಳಲ್ಲಿ ಅತ್ಯುತ್ತಮ ಗ್ರಂಥಾಲಯ ಬಳಕೆದಾರರನ್ನು ಗುರುತಿಸಿ ಸನ್ಮಾನಿಸಲಾಯಿತು. ರಸಪ್ರಶ್ನೆ, ಮೂರು ನಿಮಿಷಗಳ ಭಾಷಣ, ನಿಧಿ ಶೋಧನೆ ಹಾಗೂ ಕೊಲಾಜ್ ರಚನೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಹ್ಯಾದ್ರಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಚಂದನಾ ಬಿ.ಆರ್. ಕಾರ್ಯಕ್ರಮ ನಿರೂಪಿಸಿದರು.
What do you feel about this post?
Like
Love
Happy
Haha
Sad





