ಮಂಗಳೂರು: ನಗರದಲ್ಲಿ ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಚಿವರು ಆಗಮಿಸಲಿದ್ದು, ಸೆ.17ರ ಸಂಜೆದಿಂದ ಸೆ.19ರ ಬೆಳಿಗ್ಗೆವರೆಗೆ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ.
ಸೆ.18 ರಂದು ಪಡೀಲ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಂಡ ಬಳಿಕ ಮುಖ್ಯಮಂತ್ರಿ ಹಾಗೂ ಸಚಿವರು ಮೇರಿಹಿಲ್ನ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಬಳಿಕ ಮಂಗಳೂರು ನಗರಕ್ಕೆ ಮರಳಿ ವಾಸ್ತವ್ಯ ಹೂಡಿ, ಸೆ.19ರ ಬೆಳಿಗ್ಗೆ ನಗರದಿಂದ ನಿರ್ಗಮಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣ್ಯರ ಸಂಚಾರದ ಮಾರ್ಗ
ಸೆ.17 ರಂದು ಸಂಜೆಯಿಂದ ಸೆ.19ರ ಬೆಳಿಗ್ಗೆವರೆಗೆ ಬಜಪೆ ವಿಮಾನ ನಿಲ್ದಾಣ–ಕಾವೂರು–ಬೊಂದೆಲ್–ಮೇರಿಹಿಲ್–ಕೆ.ಪಿ.ಟಿ.–ಕದ್ರಿ ಕಂಬಳ–ಬಂಟ್ಸ್ ಹಾಸ್ಟೆಲ್–ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಹಂಪನಕಟ್ಟೆ–ಕ್ಲಾಕ್ ಟವರ್–ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗದಲ್ಲಿ ಗಣ್ಯರ ಸಂಚಾರ ಇರಲಿದೆ.
ಸೆ.18ರ ಬೆಳಿಗ್ಗೆ ಹ್ಯಾಮಿಲ್ಟನ್ ಜಂಕ್ಷನ್–ಕ್ಲಾಕ್ ಟವರ್–ಹಂಪನಕಟ್ಟೆ–ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಕೆ.ಪಿ.ಟಿ. ಜಂಕ್ಷನ್–ನಂತೂರು ವೃತ್ತ–ಪಂಪುವೆಲ್–ನಾಗುರಿ–ಬಜಾಲ್ ಕ್ರಾಸ್ (ಪ್ರಜಾಸೌಧ)–ಪಡೀಲ್ ಜಂಕ್ಷನ್ ಮಾರ್ಗದಲ್ಲಿ ಸಂಚಾರ ಇರಲಿದೆ.
ಈ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಅಡಚಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು
ಬದ್ರಿಯಾ ಜಂಕ್ಷನ್–ಹ್ಯಾಮಿಲ್ಟನ್ ಜಂಕ್ಷನ್:ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಬದ್ರಿಯಾ ಜಂಕ್ಷನ್–ನೀಲೇಶ್ವರ ರಸ್ತೆ–ರೊಸಾರಿಯೊ ರಸ್ತೆ ಮೂಲಕ ಸಂಚರಿಸಬೇಕು.
ಹ್ಯಾಮಿಲ್ಟನ್ ಜಂಕ್ಷನ್–ಬದ್ರಿಯಾ ಜಂಕ್ಷನ್: ಹ್ಯಾಮಿಲ್ಟನ್ ಜಂಕ್ಷನ್ನಿಂದ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.
ಪಂಪುವೆಲ್–ಪಡೀಲ್: ಪಂಪುವೆಲ್ ಜಂಕ್ಷನ್ನಿಂದ ನಾಗುರಿ ಮೂಲಕ ಪಡೀಲ್ ಕಡೆಗೆ ಅಥವಾ ಪಡೀಲ್ನಿಂದ ಪಂಪುವೆಲ್ ಕಡೆಗೆ ತೆರಳುವ ವಾಹನಗಳು ನಂತೂರು ವೃತ್ತ–ಕೈಕಂಬ–ಮರೋಳಿ ಮಾರ್ಗವಾಗಿ ಸಂಚರಿಸಬಹುದು. ಪರ್ಯಾಯವಾಗಿ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೊಳಿಯಾರ್–ಮೆಲ್ಕಾರ್ ಮಾರ್ಗವನ್ನೂ ಬಳಸಬಹುದು.
ಬಜಾಲ್ ಕ್ರಾಸ್–ಬಜಾಲ್: ಬಜಾಲ್ ಕ್ರಾಸ್ (ಪ್ರಜಾಸೌಧ)ನಿಂದ ಬಜಾಲ್ ಅಥವಾ ಕಂಕನಾಡಿ ರೈಲು ನಿಲ್ದಾಣದ ಕಡೆಗೆ ತೆರಳುವ ವಾಹನಗಳು ಪಡೀಲ್–ಬಜಾಲ್ ಕ್ರಾಸ್ ಬದಲಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ–ಬಜಾಲ್ ಮೂಲಕ ಸಂಚರಿಸಬೇಕು.
ತೊಕ್ಕೊಟ್ಟು–ಪಂಪುವೆಲ್: ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ತೆರಳುವ ವಾಹನಗಳು ಮಹಾಕಾಳಿಪಡ್ಪು–ಮಂಗಳಾದೇವಿ ಮಾರ್ಗವಾಗಿ ನಗರ ಪ್ರವೇಶಿಸಬೇಕು ಎಂದು ಮಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad





