ಮಂಗಳೂರು: ಚುನಾವಣೆಯೇ ಬಿಜೆಪಿಯ ಅಜೆಂಡಾ ಆಗಿದ್ದರೆ, ಕಾಂಗ್ರೆಸ್ನ ಅಜೆಂಡಾ ಅಭಿವೃದ್ಧಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಲಕ್ಷ್ಯಕ್ಕೆ ಒಳಗಾದ ಹಾಗೂ ತಳವರ್ಗದ ಜನರ, ಅದರಲ್ಲೂ ಕೊರಗ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕ್ರಮಗಳಿಗೆ ಸೆ.18 ದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆ ದೊರೆಯಲಿದೆ ಎಂದರು.
‘ದುರ್ಬಲರು ಮತ್ತು ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರಗಳು ಒತ್ತು ನೀಡಿರುವುದು ಇತಿಹಾಸ. ಮೂಲನಿವಾಸಿ ಕೊರಗರು ತೀರಾ ದುರ್ಬಲ ಸಮುದಾಯವಾಗಿದ್ದು, ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರು ಕೊರಗ ಕಾಲೋನಿಯಲ್ಲಿ ವಾಸ್ತವ್ಯ ಹೂಡಿ ಅವರ ಸಮಸ್ಯೆಗಳನ್ನು ಅರಿತು ಪರಿಹಾರ ಕ್ರಮಗಳಿಗೆ ಚಾಲನೆ ನೀಡಿದ್ದರು. ಮುಹಮ್ಮದ್ ಪೀರ್ ವರದಿ ಆಧರಿಸಿಯೂ ಕಾಂಗ್ರೆಸ್ ಸರ್ಕಾರ ಅವರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.
ಕೊರಗ ಸಮುದಾಯಕ್ಕೆ ಅಗತ್ಯವಿರುವ ಉಳಿದ ಸೌಲಭ್ಯಗಳು ಹಾಗೂ ಬೇಡಿಕೆಗಳ ಈಡೇರಿಕೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕ್ರಮ ವಹಿಸಲಿದೆ ಎಂದರು.
ಡಿಸಿ ಮನ್ನಾ ಭೂಮಿ ಇತ್ಯರ್ಥಕ್ಕೆ ಮನವಿ:
ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಈ ಭರವಸೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
‘ಭೂ ಮಸೂದೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣ, 94ಸಿ ಹಾಗೂ ಬಗರ್ ಹುಕುಂ ಯೋಜನೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಜನರು ಪ್ರಯೋಜನ ಪಡೆದಿದ್ದಾರೆ. ಬಗರ್ ಹುಕುಂನಲ್ಲಿ ಬಂಟ್ವಾಳವು ರಾಜ್ಯದಲ್ಲೇ ಅತಿ ಹೆಚ್ಚು ಫಲಾನುಭವಿಗಳನ್ನು ಹೊಂದಿತ್ತು. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಸರಕಾರಿ ಭೂಮಿಯ ಮಿತಿಯನ್ನು ಐದು ಸೆಂಟ್ಸ್ನಿಂದ ಒಂಬತ್ತು ಸೆಂಟ್ಸ್ಗೆ ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರು ಈ ಬೆಳವಣಿಗೆಗಳ ಇತಿಹಾಸವನ್ನು ಗಮನಿಸಬೇಕು’ ಎಂದರು.
ಜೈಲು ಜಾಮರ್ ವಿಷಯ ಮುಂದಿಟ್ಟುಕೊಂಡು ಸಚಿವ ಸಂಪುಟ ಸಭೆಗೆ ಅಡ್ಡಿಪಡಿಸಲು ಬಿಜೆಪಿ ಮುಂದಾಗಿರುವುದು ಎಷ್ಟು ಸಮಂಜಸ ಎಂಬುದನ್ನು ಆ ಪಕ್ಷದ ಮುಖಂಡರು ಪರಿಶೀಲಿಸಬೇಕು ಎಂದರು.
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಬಿಜೆಪಿಯ ಶಾಸಕರು ಮತ್ತು ಸಂಸದರು ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಎನ್ಎಂಪಿಟಿ, ಮಂಗಳೂರು ವಿಮಾನ ನಿಲ್ದಾಣ, ಪಾಸ್ಪೋರ್ಟ್ ಕಚೇರಿ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿವೆ. ಬಿಜೆಪಿಯವರು ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.
ದೈವಾರಾಧನೆ ಮತ್ತು ಭೂತಾರಾಧನೆಯಲ್ಲಿ ಸೇವೆ ಸಲ್ಲಿಸುವವರಿಗೆ ಪುರೋಹಿತರ ಮಾದರಿಯಲ್ಲಿ ವೇತನ ಶ್ರೇಣಿ ನೀಡಬೇಕು ಎಂಬ ಬೇಡಿಕೆಯಿದ್ದು, ಈ ಕುರಿತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಅಪ್ಪಿ, ಶಾಹುಲ್ ಹಮೀದ್, ಮುಹಮ್ಮದ್ ಮೋನು, ಪೃಥ್ವಿರಾಜ್, ನೀರಜ್ಪಾಲ್, ಪದ್ಮನಾಭ, ನವಾಜ್ , ನಝೀರ್ ಬಜಾಲ್, ಶಬ್ಬೀರ್ ಇದ್ದರು.
What do you feel about this post?
Like
Love
Happy
Haha
Sad





