ವಿಜಯಪುರ: ಆ.24 ರಿಂದ ನಾಪತ್ತೆ ಆಗಿದ್ದ ತಾಯಿ ಹಾಗೂ ಐದು ಮಂದಿ ಮಕ್ಕಳ ಮೃತದೇಹಗಳು ನಗರದ ಹೊರವಲಯದ ಭೂತನಾಳ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆ ಆಗಿವೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದ ಮಲಕಾರಿ ಭೀಮರಾಯ ಜಾಲಗೇರಿ ಅವರ ಪತ್ನಿ ಶೋಭಾ ಜಾಲಗೇರಿ (45), ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ಸಾನಿಕಾ (7) ಹಾಗೂ ವಿಕಾಸ (5) ಎಂದು ಗುರುತಿಸಲಾಗಿದೆ.
322 ಎಕರೆ ವಿಸ್ತೀರ್ಣದ ಭೂತನಾಳ ಕೆರೆಯಲ್ಲಿ ಬೆಳಿಗ್ಗೆ ಮೃತದೇಹಗಳು ತೇಲುತ್ತಿರುವುದನ್ನು ವಾಯುವಿಹಾರಕ್ಕೆ ತೆರಳಿದ್ದ ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಕೆರೆಯ ಅಂಚಿನಲ್ಲಿ ಆರು ಮೃತದೇಹಗಳು ಇರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಮೃತದೇಹಗಳನ್ನು ಮೇಲಕ್ಕೆತ್ತಿದರು. ಆ.24ರಂದು ಶೋಭಾ ಹಾಗೂ ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ಇದ್ದರೂ, ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದುಬರಲಿದೆ.
ನಗರ ಡಿವೈಎಸ್ಪಿ ನಾಗರಾಜ, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
What do you feel about this post?
Like
Love
Happy
Haha
Sad





