ಮಂಗಳೂರು: ಸಚಿವ ಯು.ಟಿ. ಖಾದರ್ ಅವರಿಗೆ ಅಮೆರಿಕದ ಇಲಿನಾಯ್ಸ್ ರಾಜ್ಯದ ನೇಪರ್ವಿಲ್ಲೆಯ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ನಡೆದ ಅಮೆರಿಕನ್ ಬಹುಜನಾಂಗೀಯ ಆಯೋಗದ 15ನೇ ವಾರ್ಷಿಕ ಜಾಗತಿಕ ಸಾಧಕರ ಸನ್ಮಾನ ಸಮಾರಂಭದಲ್ಲಿ ಪ್ರತಿಷ್ಠಿತ ಜಾಗತಿಕ ನಾಗರಿಕ ನಾಯಕತ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿ, ಈ ಗೌರವ ತಮ್ಮ ಸಾರ್ವಜನಿಕ ಸೇವೆಗೆ ದೊರೆತ ಮಹತ್ವದ ಮಾನ್ಯತೆ ಆಗಿದ್ದು, ಜನಸೇವೆಯ ಹಾದಿಯಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಇದು ಪ್ರೇರಣೆ ನೀಡುತ್ತದೆ. ಈ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಸಮರ್ಪಿಸುತ್ತಿರುವುದಾಗಿ ತಿಳಿಸಿದರು.
ಸಾರ್ವಜನಿಕ ಸೇವೆಯಲ್ಲಿ ಹಲವು ದಶಕಗಳಿಂದ ಸಲ್ಲಿಸಿರುವ ಸೇವೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ನಾಯಕತ್ವ, ಸಮಗ್ರ ಆಡಳಿತ ಹಾಗೂ ಸಮುದಾಯ ಕೇಂದ್ರಿತ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಆಯೋಗದ ಸಂಸ್ಥಾಪಕ ಅಧ್ಯಕ್ಷ ಹಾಗೂ ಜಾಗತಿಕ ಕಾರ್ಯತಂತ್ರಗಳ ಒಕ್ಕೂಟದ ಅಧ್ಯಕ್ಷ ಡಾ. ವಿಜಯ್ ಜಿ. ಪ್ರಭಾಕರ್ ಸೇರಿದಂತೆ ಹಲವು ಗಣ್ಯರು ಇದ್ದರು.
ಅಮೆರಿಕಾ ಪ್ರವಾಸದಲ್ಲಿರುವ ಸಚಿವ ಖಾದರ್ ಅವರು ಜುಲೈ 27 ರಂದು ಇಂಡಿಯಾನಾ ರಾಜ್ಯದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ‘ಆರೋಗ್ಯಕರ ಮಕ್ಕಳು, ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಭವಿಷ್ಯ’ ವಿಷಯದ ಜಾಗತಿಕ ಕಾರ್ಯತಂತ್ರಗಳ ಒಕ್ಕೂಟದ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ ಅಮೆರಿಕದ ರಾಜಧಾನಿ ವಾಷಿಂಗ್ಟನ್ಗೆ ತೆರಳಿ ರಾಷ್ಟ್ರೀಯ ನಾಯಕರು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದು, ಜುಲೈ 30 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
What do you feel about this post?
Like
Love
Happy
Haha
Sad







